ಬೆಂಗಳೂರು: ಸಿರಿ ವೈಭವ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ (Sirivaibhava Souhardha Pattina Sahakari Niyamitha) ಸೊಸೈಟಿ ಅವ್ಯವಹಾರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ED) ತನಿಖೆ ಮುಂದುವರಿದಿದ್ದು, ಇದೀಗ ಮತ್ತೆ 18.32 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.
ಸೊಸೈಟಿಯ ಅಧ್ಯಕ್ಷೆ ಬಿ.ಎಸ್ ನಾಗವಲ್ಲಿ, ಸಿಇಒ ರಾಜೇಶ್ ಸೇರಿದಂತೆ ಇತರರಿಗೆ ಸೇರಿದ ಜಮೀನು, ನಿವೇಶನ ಹಾಗೂ ಕಟ್ಟಡಗಳನ್ನ ಇಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಸೊಸೈಟಿ ಹಣವನ್ನ ದುರುಪಯೋಗಪಡಿಸಿಕೊಂಡು ರಾಮನಗರ, ಮೈಸೂರು ಹಾಗೂ ಬೆಂಗಳೂರಿನಲ್ಲಿ ಆಸ್ತಿ ಖರೀದಿಸಿದ್ದ ಆರೋಪ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ED, Bengaluru has provisionally attached immovable properties in the form of residential plots and flats amounting to Rs.18.32 Crore belonging to/associated with Rajesh V.R., Smt. Nagavalli B.S. and their associates, on 20.08.2026 under PMLA, 2002, in connection with the… pic.twitter.com/ePLJehQ1yk
— ED (@dir_ed) August 21, 2026
ಈ ಪ್ರಕರಣದಲ್ಲಿ ಕಳೆದ ಫೆಬ್ರವರಿಯಲ್ಲೇ 16.95 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನ ಇಡಿ ಮುಟ್ಟುಗೋಲು ಹಾಕಿಕೊಂಡಿತ್ತು. ಬಳಿಕ ಕಳೆದ ಮಾರ್ಚ್ನಲ್ಲಿ ಪ್ರಾಸಿಕ್ಯೂಷನ್ಗೆ ದೂರು ಕೂಡ ಸಲ್ಲಿಸಲಾಗಿತ್ತು. ತನಿಖೆ ಮುಂದುವರಿದ ಸಂದರ್ಭದಲ್ಲಿ ಮತ್ತಷ್ಟು ಆಸ್ತಿಗಳ ಮಾಹಿತಿ ಪತ್ತೆಯಾಗಿದ್ದು, ಇದೀಗ ಹೆಚ್ಚುವರಿಯಾಗಿ 18.32 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.
ಸೊಸೈಟಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಕರ್ನಾಟಕ ರಾಜ್ಯ ಫೆಡರಲ್ ವ್ಯವಸ್ಥಾಪಕ ನಿರ್ದೇಶಕರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು. ಅಧಿಕಾರ ದುರುಪಯೋಗಪಡಿಸಿಕೊಂಡು ಸೊಸೈಟಿ ಹಣದಿಂದ ಆಸ್ತಿ ಖರೀದಿಸಿದ ಆರೋಪಗಳ ಕುರಿತು ತನಿಖೆ ಮುಂದುವರಿದಿದೆ.

