ಹಾಸನ: ನಾನು ಚುನಾವಣಾ ರಾಜಕಾರಣದಲ್ಲಿ ಮುಂದುವರಿಯಬಾರದು ಎಂದು ಸಣ್ಣ ತೀರ್ಮಾನ ಮಾಡಿದ್ದೇನೆ ಎಮದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ (DV Sadananda Gowda) ಅವರು ಚುನಾವಣಾ ರಾಜಕೀಯಕ್ಕೆ (Electoral Politics) ನಿವೃತ್ತಿ ಘೋಷಿಸಿದ್ದಾರೆ.
ಹಾಸನದಲ್ಲಿ (Hassan) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂವತ್ತು ವರ್ಷ ನನ್ನ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಯಡಿಯೂರಪ್ಪ ಬಿಟ್ಟರೆ ನಮ್ಮ ಪಕ್ಷದಲ್ಲಿ ನಾನೇ ನಂಬರ್ ಒನ್ ಫಲಾನುಭವಿ. 10 ವರ್ಷ ಎಂಎಲ್ಎ, 20 ವರ್ಷ ಎಂಪಿ, 1 ವರ್ಷ ಮುಖ್ಯಮಂತ್ರಿ, ಒಂದೂವರೆ ವರ್ಷ ವಿರೋಧ ಪಕ್ಷದ ನಾಯಕ, 5 ವರ್ಷ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕ, ನಾಲ್ಕೂವರೆ ವರ್ಷ ಪಕ್ಷದ ರಾಜ್ಯಾಧ್ಯಕ್ಷ, ಕೇಂದ್ರದಲ್ಲಿ 7 ವರ್ಷ ನರೇಂದ್ರ ಮೋದಿ ಜೊತೆ ಕ್ಯಾಬಿನೆಟ್ ಮಂತ್ರಿ ಇಷ್ಟಕ್ಕೆ ಸಂತೋಷ ಪಡದ ರಾಜಕಾರಣಿ ಅವನು ರಾಜಕಾರಣಿ ಅಲ್ಲ. ಅವನನ್ನು ಸ್ವಾರ್ಥಿ ಎಂದು ತಿಳಿದುಕೊಳ್ಳುತ್ತೇನೆ ಎಂದರು.
ಎಲ್ಲಾ ರಾಜಕೀಯ ಪಕ್ಷದಲ್ಲಿ ನಾನು ಸತ್ಯಹರಿಶ್ಚಂದ್ರ ಅಂತ ಹೇಳಿಕೊಂಡರು ಕೂಡ ಹತ್ತು ಪರ್ಸೆಂಟ್ ಜನ ಅಧಿಕಾರಕ್ಕಾಗಿ ಜಂಪ್ ಮಾಡುವವರಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ತಕ್ಷಣ ಬಿಜೆಪಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಕ್ಷಣ ಬಿಜೆಪಿಯಿಂದ (BJP) ಕಾಂಗ್ರೆಸ್ (Congress), ಏನೂ ಇಲ್ಲದ ಜೆಡಿಎಸ್ ಅಧಿಕಾರಕ್ಕೆ ಬಂದರೆ ತಕ್ಷಣ ಅವರ ಜೊತೆ. ಈ ರೀತಿ ಹೋಗುವಂತಹವರು ಎಲ್ಲಾ ಪೊಲಿಟಿಕಲ್ ಪಾರ್ಟಿಯಲ್ಲಿದ್ದಾರೆ. ಅದರಿಂದ ನಮ್ಮ ಪಾರ್ಟಿ ಹೊರತಾಗಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಸೋಮಶೇಖರ್ ವಿಷ ಕುಡಿದಿದ್ರೆ ಪಕ್ಷ ಬಿಟ್ಟು ಹೋಗಲಿ: ಈಶ್ವರಪ್ಪ ಕಿಡಿ
ಆಪರೇಷನ್ ಕಮಲದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಡಿವಿಎಸ್, ನಮಗೆ ಅದರ ಅಗತ್ಯ ಇಲ್ಲ. ಹಿನ್ನಡೆ ನಂತರ ನಾವು ಸ್ವಂತ ಶಕ್ತಿಯಲ್ಲಿ ಬಿಜೆಪಿ ಕಟ್ಟಬೇಕೆಂದು ನಿರ್ಣಯ ಮಾಡಿದ್ದೇವೆ. ಯಾರನ್ನೋ ಕರೆದುಕೊಂಡು ಬಂದು ಮತ್ತೆ ವ್ಯಾತ್ಯಾಸಗಳಾಗುವುದು ಬೇಡ ಎಂದು ನಿಶ್ಚಯ ಮಾಡಿದ್ದೇವೆ ಎಂದು ತಿಳಿಸಿದರು.