ಕಲಬುರಗಿ: ಕೆಪಿಎಸ್ಸಿ ಪರೀಕ್ಷಾ (KPSC Exam) ಅಕ್ರಮ ತಡೆಗಟ್ಟುವ ಕ್ರಮವಾಗಿ ತಾಳಿ (Mangalasutra) ಹಾಗೂ ಕಾಲುಂಗುರ ತೆಗೆಸಿ ಯಡವಟ್ಟು ಮಾಡಿದ ಅಧಿಕಾರಿಗಳು `ಪಬ್ಲಿಕ್ ಟಿವಿ’ಯಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದಾರೆ. ಕೂಡಲೇ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ತಾಳಿ ಹಾಗೂ ಕಾಲುಂಗುರ ತೆಗೆಸದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕಲಬುರಗಿಯ (Kalaburagi) ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ, ಗ್ರೂಪ್ ಸಿ ಹುದ್ದೆಗೆ ನಡೆಯುತ್ತಿರುವ ಪರೀಕ್ಷೆಯಲ್ಲಿ ಅಕ್ರಮ ತಡೆಯಲು ತಾಳಿ, ಕಾಲುಂಗುರ ಹಾಗೂ ಕಿವಿಯಲ್ಲಿದ್ದ ಓಲೆಗಳನ್ನು ಅಧಿಕಾರಿಗಳು ತೆಗೆಸಿದ್ದರು. ಈ ವೇಳೆ ತಾಳಿ ತೆಗೆಯಲು ಹಿಂದೇಟು ಹಾಕಿದ ಮಹಿಳೆಯರಿಗೆ ಪರೀಕ್ಷೆ ಬರೆಯಲು ಅಧಿಕಾರಿಗಳು ಅವಕಾಶ ನಿರಾಕರಿಸಿದ್ದರು. ಅಲ್ಲದೇ ಕಿವಿ ಓಲೆ ತೆಗೆಯಲು ಬರದಿದ್ದಾಗ ಚಿನ್ನದಂಗಡಿಗೆ ಹೋಗಿ ಮಹಿಳೆಯರು ತೆಗೆಸಿಕೊಂಡು ಬಂದಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಚಾಕು ಇರಿದು ಉಪನಿರ್ದೇಶಕಿಯ ಬರ್ಬರ ಹತ್ಯೆ
ರಾಯಚೂರು ಮೂಲದ ಇಬ್ಬರು ಮಹಿಳೆಯರನ್ನು ಅಧಿಕಾರಿಗಳು ತೀವ್ರ ತಪಾಸಣೆ ಮಾಡಿ ತಾಳಿ ಹಾಗೂ ಕಾಲುಂಗುರ ತೆಗೆಯಲು ಹೇಳಿದ್ದರು. ಈ ವೇಳೆ ಅನಿವಾರ್ಯವಾಗಿ ಮಹಿಳೆಯರು ತೆಗೆದು ಸಂಬಂಧಿಕರ ಬಳಿ ನೀಡಿ ಪರೀಕ್ಷಾ ಹಾಲ್ಗೆ ತೆರಳಿದ್ದರು. ಈ ಸುದ್ದಿಯನ್ನು `ಪಬ್ಲಿಕ್ ಟಿವಿ’ ಪ್ರಸಾರ ಮಾಡಿತ್ತು.
ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಹಿರಿಯ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿ ತಾಳಿಯನ್ನು ವಾಪಸ್ ನೀಡುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಅರಣ್ಯ ಸಿಬ್ಬಂದಿ, ಬೇಟೆಗಾರರ ನಡುವೆ ಗುಂಡಿನ ಚಕಮಕಿ – ಓರ್ವ ಗುಂಡೇಟಿಗೆ ಬಲಿ