ಬೆಂಗಳೂರು: ಸೋಮವಾರ ತಾನೇ ಜಾಮೀನಿನ ಮೇಲೆ ನಟ ದುನಿಯಾ ವಿಜಯ್ ಜೈಲಿನಿಂದ ಬಿಡುಗಡೆಯಾಗಿ ಹೊರಬಂದಿದ್ದಾರೆ. ಆದ್ರೆ ಇಂದು ವಿಜಿ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.
`ನೀವು ಸೆಲೆಬ್ರಿಟಿ, ಇನ್ನು ಮುಂದೆ ಬುದ್ಧಿ ಕಲಿತು ಸರಿಯಾಗಿರಿ ಎಂದು ದುನಿಯಾ ವಿಜಿಗೆ ಜಡ್ಜ್ ಹೇಳಿ ಬೇಲ್ ಕೊಟ್ಟಿದ್ದರು. ಆದರೆ ಜಡ್ಜ್ ಹೇಳಿದ್ದರೂ ಇಂದು ದುನಿಯಾ ವಿಜಯ್ ಬುದ್ಧಿ ಕಲಿಯಲಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಇಂದು ಗಿರಿನಗರ ಪೊಲೀಸ್ ಠಾಣೆಗೆ ಹೋಗುತ್ತಿದ್ದರು. ಈ ವೇಳೆ ವರದಿಗಾರರು ಅವರನ್ನು ಮಾತನಾಡಿಸಲು ಮುಂದಾಗಿದ್ದಾರೆ. ಇದರಿಂದ ಸಿಟ್ಟುಗೊಂಡ ವಿಜಿ, ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.
ಮೊದಲನೇ ಪತ್ನಿಯಿಂದ ಕಂಗೆಟ್ಟು ಗಿರಿನಗರ ಪೊಲೀಸ್ ಠಾಣೆಗೆ ದೂರು ಕೊಡಲು ಬಂದಿದ್ದೀರಾ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ವಿಜಯ್, ಇದು ನಮ್ಮ ಕುಟುಂಬದ ವಿಚಾರ, ನಾನು ಯಾರ ಮೇಲೂ ದೂರು ಕೊಡಲು ಬಂದಿಲ್ಲ. ನಮ್ಮ ಕುಟುಂಬ ಸಮಸ್ಯೆಯನ್ನ ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ಸಿಡಿಮಿಡಿಗೊಂಡಿದ್ದಾರೆ.
ಇದಕ್ಕೆ ಮತ್ತೆ ಯಾಕೆ ಪೊಲೀಸ್ ಠಾಣೆಗೆ ಬಂದಿದ್ದೀರಾ ಎಂದು ಮರು ಪ್ರಶ್ನೆ ಮಾಡಿದ್ದಕ್ಕೆ, ನನ್ನ ಕೆಲಸಕ್ಕೆ ನಾನು ಬಂದಿದ್ದೇನೆ. ನನಗೆ ಸಾವಿರಾರು ಕೆಲಸಗಳಿವೆ. ಎಲ್ಲವನ್ನೂ ನಿಮಗೆ ಹೇಳುವ ಅವಶ್ಯಕತೆ ಇಲ್ಲ ಎಂದು ವರದಿಗಾರರಿಗೆ ಧಮ್ಕಿ ಹಾಕಿ ಪೊಲೀಸ್ ಠಾಣೆಯ ಒಳಗೆ ಹೋಗಿದ್ದಾರೆ.
ಈಗಾಗಲೇ ದುನಿಯಾ ವಿಜಯ್ ವಿರುದ್ಧ ಪುತ್ರಿ ಮೋನಿಕಾ ಅಸಮಾಧಾನ ಹೊರ ಹಾಕಿದ್ದು, ತಂದೆಯೊಂದಿಗೆ ಜಗಳ ಮಾಡಿದ್ದಾರೆ. ಬಳಿಕ ವಿಜಯ್ ಅವರ ಬಳಿ ಅಮ್ಮನ ಮನೆಗೆ ತೆರಳುವುದಾಗಿ ಪುತ್ರಿ ಹಠ ಹಿಡಿದಿದ್ದರು. ಸ್ವಲ್ಪ ಸಮಯದ ಬಳಿಕ ವಿಜಯ್ ಅವರು ಮಗಳಿಗೆ ಬ್ಯಾಗ್ ನೀಡಿ ಮನೆ ಹಿಂಬಾಗಿಲಿನಿಂದ ಪುತ್ರಿಯನ್ನು ಕಳುಹಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇದೇ ವೇಳೆ ವಿಜಯ್ ಅವರ ತಾಯಿಯೂ ನಾಗರತ್ನ ಅವರ ಪರವೇ ಮಾತನಾಡಿದ್ದು, ಕೀರ್ತಿಯಿಂದಲೇ ಇಷ್ಟೆಲ್ಲ ನಡೆಯಿತು ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=ocxlKBxASJc