ಭೋಪಾಲ್: ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ (Kuno National Park) ಹೃದಯ-ಶ್ವಾಸಕೋಶ ವೈಫಲ್ಯದಿಂದ (Cardio Pulmonary Failure) 2ನೇ ಚೀತಾ ಸಾವನ್ನಪ್ಪಿದೆ ಎಂದು ವೈದ್ಯರು ಸ್ಪಷ್ಟನೆ ನೀಡಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ತರಿಸಲಾಗಿದ್ದ 12 ಚೀತಾಗಳ ಪೈಕಿ ಉದಯ್ ಹೆಸರಿನ ಗಂಡು ಚೀತಾ (Cheetah) ಭಾನುವಾರ ಸಾವನ್ನಪ್ಪಿತ್ತು. ಇದರಿಂದ ಚೀತಾಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಒತ್ತಾಯ ಕೇಳಿಬಂದಿತ್ತು. ಈ ಬೆನ್ನಲ್ಲೇ ವೈದ್ಯರು (Doctors) ಚೀತಾ ಸಾವಿಗೆ ಕಾರಣವನ್ನು ತಿಳಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಆಫ್ರಿಕಾದಿಂದ ತರಿಸಿದ್ದ 12ರಲ್ಲಿ ಒಂದು ಚೀತಾ ಸಾವು!
ಉದಯ್ ಹೆಸರಿನ ಚೀತಾದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ, ಅದು ಹೃದಯ-ಶ್ವಾಸಕೋಶದ ವೈಫಲ್ಯದಿಂದ ಸಾವನ್ನಪ್ಪಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (PCCF) ಜೆ.ಎಸ್ ಚೌಹಾಣ್ ತಿಳಿಸಿದ್ದಾರೆ.
ಜಬಲ್ಪುರ ಮತ್ತು ಭೋಪಾಲ್ನ ತಲಾ ಒಬ್ಬ ವಿಧಿವಿಜ್ಞಾನ ತಜ್ಞರನ್ನೊಳಗೊಂಡ ಐವರು ತಜ್ಞರ ಸಮಿತಿ ಶವ ಪರೀಕ್ಷೆ ನಡೆಸಿತು. ಇದನ್ನೂ ಓದಿ: ಕೊಚ್ಚಿಯಲ್ಲಿ ಭಾರತದ ಮೊದಲ ವಾಟರ್ ಮೆಟ್ರೋ ಸೇವೆ – ಇಂದು ಪ್ರಧಾನಿ ಮೋದಿ ಚಾಲನೆ
ಚೀತಾದ ರಕ್ತ ಮತ್ತು ಇತರ ಪ್ರಮುಖ ಅಂಗಾಂಗಗಳ ಮಾದರಿಯನ್ನ ಜಬಲ್ಪುರದ ನಾನಾಜಿ ದೇಶ್ಮುಖ್ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ವನ್ಯಜೀವಿ ಫೊರೆನ್ಸಿಕ್ ವಿಭಾಗಕ್ಕೆ ಕಳುಹಿಸಲಾಗಿದೆ. ಸುಧಾರಿತ ಪರೀಕ್ಷೆಗಳ ಫಲಿತಾಂಶಗಳು ತಿಳಿದ ನಂತರವಷ್ಟೇ ಚೀತಾ ಸಾವಿನ ನಿಖರ ಕಾರಣ ಕಂಡುಹಿಡಿಯಬಹುದು ಎಂದು ವೈದ್ಯರು ಹೇಳಿದ್ದಾರೆ.
ಶನಿವಾರ ಸಂಜೆಯವರೆಗೂ ಉದಯ್ ಚೀತಾ ಆರೋಗ್ಯವಾಗಿತ್ತು. ಮರುದಿನ ಬೆಳಗ್ಗೆ ಅಸ್ವಸ್ಥಗೊಂಡಿರುವುದನ್ನು ವೈದ್ಯರ ತಂಡ ಗಮನಿಸಿ, ಬೆಳಿಗ್ಗೆ 11 ಗಂಟೆಗೆ ಚಿಕಿತ್ಸೆ ನೀಡಲು ಪ್ರಾರಂಭಿಸಿತ್ತು. ಆದರೆ ಸಂಜೆ 4 ಗಂಟೆಗೆ ಚೀತಾ ಸಾವನ್ನಪ್ಪಿತ್ತು. ಇದಕ್ಕೂ ಮುನ್ನ ನಮೀಬಿಯಾದಿಂದ ತಂದಿದ್ದ ಸಾಶಾ ಹೆಸರಿನ ಹೆಣ್ಣು ಚೀತಾ ಕಿಡ್ನಿ ಸೋಂಕಿನಿಂದ ಮೃತಪಟ್ಟಿತ್ತು.
ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು ಸಂರಕ್ಷಣೆ ಮಾಡುವ ಯೋಜನೆಯಡಿ ನಮೀಬಿಯಾದಿಂದ (Namibia) ಭಾರತಕ್ಕೆ 3 ಗಂಡು ಹಾಗೂ 5 ಹೆಣ್ಣು ಚೀತಾಗಳನ್ನು ವಿಶೇಷ ವಿಮಾನದಲ್ಲಿ ತರಲಾಗಿತ್ತು. ತಮ್ಮ ಜನ್ಮದಿನವಾದ ಸೆ.17 ರಂದು ಪ್ರಧಾನಿ ಮೋದಿ (Narendra Modi) ಈ ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿದ್ದರು. ನವೆಂಬರ್ನಲ್ಲಿ ದೊಡ್ಡ ಆವರಣಕ್ಕೆ ಸ್ಥಳಾಂತರಿಸಿದ ಬಳಿಕ ಕಾಡಿಗೆ ಬಿಡುಗಡೆ ಮಾಡಲಾಗಿತ್ತು. ಬಳಿಕ ಚೀತಾಗಳು ಕಾಡಿನ ವಾತಾವರಣಕ್ಕೆ ಹೊಂದಿಕೊಂಡು ಸ್ವತಃ ಬೇಟೆಯಾಡಲು ಆರಂಭಿಸಿದ್ದವು. ಇದಾದ ತಿಂಗಳುಗಳ ಬಳಿಕ ದಕ್ಷಿಣ ಆಫ್ರಿಕಾದಿಂದ ಮತ್ತೆ 12 ಚೀತಾಗಳನ್ನು ಭಾರತಕ್ಕೆ ತರಿಸಲಾಯಿತು.