ಬೆಂಗಳೂರು: ರಾಜ್ಯ ರಾಜಕಾರಣದ ಅತ್ಯಂತ ಪ್ರಮುಖ ಕ್ಷಣಕ್ಕೆ ಕೌಂಟ್ಡೌನ್ ಶುರುವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಇನ್ನು ಕೆಲವೇ ಕ್ಷಣಗಳು ಬಾಕಿ ಇವೆ. ಇಂದು ಸಂಜೆ 4:05ಕ್ಕೆ ಡಿಕೆಶಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ.
ವಿಶೇಷವೆಂದರೆ, ಈ ಪದಗ್ರಹಣ ಸಮಾರಂಭಕ್ಕೆ ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದ ಹಿನ್ನೆಲೆಯಲ್ಲಿ ಅತ್ಯಂತ ಅಪರೂಪದ ಹಾಗೂ ಶಕ್ತಿಶಾಲಿ ಮಾಲವ್ಯ ಯೋಗದ(Malavya Yoga) ಮುಹೂರ್ತವನ್ನು ನಿಗದಿಪಡಿಸಲಾಗಿದೆ.
ಮುಹೂರ್ತದ ವಿಶೇಷತೆ ಏನು?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜೂನ್ 3ರ ಇಂದು ಸಂಜೆ 4:05ರ ಸಮಯ ಉತ್ತಮ ಮುಹೂರ್ತವೆಂದು ಹೇಳಲಾಗುತ್ತಿದೆ. ಇಂದು ಸಂಜೆ 4:05ಕ್ಕೆ ತುಲಾ ಲಗ್ನ ಇರಲಿದ್ದು, ಇದು ಸಾರ್ವಜನಿಕ ಜೀವನ ಮತ್ತು ರಾಜಕೀಯ ನಾಯಕತ್ವಕ್ಕೆ ಸಕಾರಾತ್ಮಕ ಶಕ್ತಿ ನೀಡುತ್ತದೆ.
ಪ್ರಸ್ತುತ ಜಾತಕದಲ್ಲಿ ಗುರು ಗ್ರಹವು ಉಚ್ಚ ಸ್ಥಿತಿಯಲ್ಲಿದ್ದಾನೆ. ಇದು ರಾಜಕೀಯವಾಗಿ ಅಭಿವೃದ್ಧಿ ಹಾಗೂ ಎಷ್ಟು ದೊಡ್ಡ ಸವಾಲುಗಳು ಎದುರಾದರೂ ಅದನ್ನೆಲ್ಲ ಮೆಟ್ಟಿ ನಿಂತು ಸುಗಮ ಆಡಳಿತ ನಡೆಸಲು ಹಾದಿ ಸುಗಮ ಮಾಡಿಕೊಡುತ್ತದೆ. ಇದನ್ನೂ ಓದಿ: ಬುಧವಾರ ಬೆಳಗ್ಗೆ 10 ಗಂಟೆಗೆ ಸಚಿವ ಸಂಪುಟ ಪಟ್ಟಿ ರಿಲೀಸ್: ಡಿಕೆಶಿ
ಜಾತಕದ ಹತ್ತನೇ ಮನೆ (ದಶಮ ಭಾವ) ಬಲವಾಗಿರುವುದರಿಂದ, ಮುಂಬರುವ ದಿನಗಳಲ್ಲಿ ಜನಸಾಮಾನ್ಯರಲ್ಲಿ ಡಿಕೆಶಿ ಪರವಾಗಿ ದೊಡ್ಡ ಅಲೆ ಸೃಷ್ಟಿಯಾಗುವ ಜೊತೆಗೆ ಉನ್ನತ ಸ್ಥಾನಮಾನ ಸಿಗುವ ಸಾಧ್ಯತೆ ದಟ್ಟವಾಗಿದೆ.
ಮಾಲವ್ಯ ಯೋಗವು ಶುಕ್ರ ಗ್ರಹದ ಪ್ರಭಾವದಿಂದ ಉಂಟಾಗುವುದರಿಂದ, ಡಿಕೆಶಿ ಪಾಲಿಗೆ ಇದು ಭಾಗ್ಯದ ಬಾಗಿಲನ್ನು ತೆರೆಯಲಿದ್ದು, ಅಧಿಕಾರದ ಗದ್ದುಗೆಗೆ ಮತ್ತಷ್ಟು ಶಕ್ತಿ ತುಂಬಲಿದೆ ಎಂಬ ಬಲವಾದ ನಂಬಿಕೆ ಇದೆ.
ಸವಾಲುಗಳ ಸುಳಿವು!
ಮಾಲವ್ಯ ಯೋಗದಂತಹ ಶುಭ ಫಲಗಳಿದ್ದರೂ, ಈ ಮುಹೂರ್ತದಲ್ಲಿ ಕೆಲವು ಗ್ರಹಗತಿಗಳು ಆಡಳಿತದ ಹಾದಿ ಅಷ್ಟು ಸುಲಭವಲ್ಲ ಎಂಬುದನ್ನೂ ಸೂಚಿಸುತ್ತಿವೆ.
ಮುಹೂರ್ತದ ಸಮಯದಲ್ಲಿ ಶನಿ ಗ್ರಹದ ಪ್ರಭಾವ ಇರುವುದರಿಂದ ಆಡಳಿತದಲ್ಲಿ ಕೊಂಚ ಸವಾಲುಗಳು ಎದುರಾಗಲಿವೆ. ಪ್ರತಿಯೊಂದು ನಿರ್ಧಾರದ ಮೇಲೂ ವಿರೋಧ ಪಕ್ಷಗಳ ಕಣ್ಣಿರುತ್ತದೆ.
ಸಪ್ತಮ ಭಾವದಲ್ಲಿ ಮಂಗಳ ಗ್ರಹ ಇರುವುದರಿಂದ ರಾಜಕೀಯ ಸಂಘರ್ಷಗಳು ಹಾಗೂ ಪಕ್ಷದೊಳಗೆ ಆಂತರಿಕ ಕಲಹದ ಕರಿಛಾಯೆ ಆವರಿಸುವ ಆತಂಕವೂ ಇದೆ.
ಮುಹೂರ್ತದಲ್ಲಿ ಶನಿ ಮತ್ತು ಮಂಗಳನ ಪ್ರಭಾವದಿಂದಾಗಿ ಆಂತರಿಕ ಭಿನ್ನಮತ ಹಾಗೂ ರಾಜಕೀಯ ಸವಾಲುಗಳು ಎದುರಾಗುವುದು ಗ್ಯಾರಂಟಿ. ಆದರೆ ಉಚ್ಚ ಸ್ಥಿತಿಯಲ್ಲಿರುವ ಗುರು ಹಾಗೂ ಮಾಲವ್ಯ ಯೋಗದ ಬಲವು ಈ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ಡಿಕೆಶಿ ಅವರಿಗೆ ನೀಡಬಹುದು ಎಂದು ವಿಶ್ಲೇಷಿಸಲಾಗುತ್ತದೆ.
