-ಸಚಿವ ಡಿಕೆಶಿ ಅಸ್ತ್ರದ ವಿರುದ್ಧ ರೆಡ್ಡಿ ಬಳಿ ಇದೆಯಂತೆ ಬ್ರಹ್ಮಾಸ್ತ್ರ!
ಬಳ್ಳಾರಿ: ತೀವ್ರ ಪೈಪೋಟಿಯಿಂದ ಕೂಡಿರುವ ಬಳ್ಳಾರಿ ಉಪಚುನಾವಣೆಯ ರಾಜಕೀಯದಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಬಿಜೆಪಿ ಶಾಸಕ ಶ್ರೀರಾಮಲು ಹಾಗೂ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿಯಲ್ಲೇ ಹಿನ್ನೆಡೆ ಉಂಟಾಗುವಂತೆ ಮಾಡಲು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಇದರ ಭಾಗವಾಗಿ ಸಚಿವ ಡಿಕೆಶಿ ಇಂದು ಸುದ್ದಿಗೋಷ್ಠಿ ಕರೆದಿದ್ದು, ಮಹತ್ವ ಅಂಶಗಳನ್ನು ತಿಳಿಸುತ್ತಾರೆ ಎನ್ನಲಾಗಿದೆ.
ಕಳೆದ 2 ದಿನಗಳಿಂದ ಸಚಿವ ಡಿಕೆ ಶಿವಕುಮಾರ್ ಅವರು ಅಧಿಕಾರಿಗಳಿಂದ ಕೆಲ ದಾಖಲೆಗಳನ್ನು ಸಂಗ್ರಹ ಮಾಡುತ್ತಿದ್ದು, ಉಪಚುನಾವಣೆಯ ಪ್ರಚಾರದ ಕೊನೆ ಹಂತದ ಈ ಸಮಯದಲ್ಲಿ ಅವುಗಳನ್ನು ಬಿಡುಗಡೆ ಮಾಡಿ ಬಿಜೆಪಿ ಅಭ್ಯರ್ಥಿ ಶಾಂತಾ ಅವರಿಗೆ ಹಿನ್ನಡೆ ಉಂಟು ಮಾಡುವ ತಂತ್ರ ರೂಪಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಅವರು ಬಳ್ಳಾರಿ ಜಿಲ್ಲೆಯಲ್ಲಿ ಮಾಡಿದ್ದಾರೆ ಎನ್ನಲಾದ ಭೂ ಅಕ್ರಮ ವಿವರಗಳನ್ನು ಬಹಿರಂಗ ಪಡಿಸುವ ಮೂಲಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಪರ ಹೆಚ್ಚಿನ ಮತ ಸೆಳೆಯುವ ಉದ್ದೇಶ ಹೊಂದಿದ್ದಾರೆ. ಅಲ್ಲದೇ ಡಿಕೆಶಿ ಅವರು ಬಿಡುಗಡೆ ಮಾಡುವ ಪ್ರಮುಖ ದಾಖಲೆಗಳಲ್ಲಿ ಸಿಡಿಯೂ ಇದೆ ಎನ್ನಲಾಗಿದ್ದು, ಇದರಲ್ಲಿ ಯಾವೆಲ್ಲಾ ಮಾಹಿತಿ ಇರಲಿದೆ ಎಂಬುದು ಚರ್ಚೆಗೆ ಕಾರಣವಾಗಿದೆ.
ಇತ್ತ ಡಿಕೆ ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ಕರೆದ ಬೆನ್ನಲ್ಲೇ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಕೂಡ ಒಂದು ಆಡಿಯೋ ಬಿಡುಗಡೆ ಮಾಡುವ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಗಾಲಿ ಜನಾರ್ದನ ರೆಡ್ಡಿ ಅವರ ಬಳಿ ಇರುವ ಆಡಿಯೋ ಸಚಿವ ಡಿಕೆಶಿವಕುಮಾರ್ ಅವರಿಗೆ ಹಿನ್ನೆಡೆ ಉಂಟು ಮಾಡುತ್ತದೆ ಎನ್ನಲಾಗಿದೆ. ಹೀಗಾಗಿ ಸಚಿವ ಡಿಕೆ ಶಿವಕುಮಾರ್, ಜನಾರ್ದನ ರೆಡ್ಡಿ, ಶ್ರೀರಾಮುಲುರ ವಿರುದ್ಧ ಯಾವ ಅಸ್ತ್ರ ಪ್ರಯೋಗ ಮಾಡುತ್ತಾರೆ ಎನ್ನುವುದರ ಮೇಲೆ ಜನಾರ್ದನ ರೆಡ್ಡಿ ಅವರ ನಡೆ ಮೇಲೆ ನಿಂತಿದೆ. ಸಚಿವ ಡಿಕೆ ಶಿವಕುಮಾರ್ ಬಳ್ಳಾರಿ ಕಣ ಗೆಲ್ಲಲು ತಂತ್ರ ರೂಪಿಸಿದ್ದರೆ, ಜನಾರ್ದನ ರೆಡ್ಡಿ ಸಹ ಪ್ರತಿತಂತ್ರ ಹೂಡಿರುವುದು ರಾಜಕೀಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv