ರಾಯಚೂರು: ಜಿಲ್ಲೆಯಲ್ಲಿ ವಿಮಾನ ನಿಲ್ದಾಣ (Raichuru Airport) ಕಾಮಗಾರಿ ಆರಂಭಕ್ಕೆ ಇನ್ನೂ ಯಾವಾಗ ಕಾಲ ಕೂಡಿ ಬರುತ್ತದೆಯೋ ಗೊತ್ತಿಲ್ಲ. ಆದರೆ ಈಗ ವಿಮಾನ ನಿಲ್ದಾಣಕ್ಕಾಗಿ 30 ದಿನದೊಳಗೆ ಮನೆ ಖಾಲಿ ಮಾಡಬೇಕು ಎಂದು ಜಿಲ್ಲಾಡಳಿತ ಯರಮರಸ್ ದಂಡು ಹಾಗೂ ಏಗನೂರು ಗ್ರಾಮದ 108 ಜನ ಗ್ರಾಮಸ್ಥರಿಗೆ ನೋಟೀಸ್ ನೀಡಿದೆ. ನೂರಾರು ವರ್ಷಗಳಿಂದ ವಾಸ ಮಾಡಿದ ಸ್ಥಳದಲ್ಲಿನ ಮನೆ ಬಿಟ್ಟು ಎಲ್ಲೂ ಹೋಗಲ್ಲ ಅಂತ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಜಿಲ್ಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಅಂತಲೇ ಸ್ವಾತಂತ್ರ್ಯ ಪೂರ್ವದಿಂದಲೇ 400 ಎಕರೆ ಜಾಗವನ್ನ ನಗರದ ಹೊರವಲಯದಲ್ಲಿ ಮೀಸಲಿಡಲಾಗಿದೆ. ಆದರೆ ಜಿಲ್ಲೆಯ ಜನರಿಗೆ ಕನಸಾಗೇ ಉಳಿದಿದ್ದ ವಿಮಾನ ನಿಲ್ದಾಣ ಪ್ರಕ್ರಿಯೆ ಈಗ ಆರಂಭವಾಗಿದೆ. ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಕ್ಕೆ ಜಿಲ್ಲಾ ಖನಿಜ ಪ್ರತಿಷ್ಠಾನ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಆರ್ಥಿಕ ನೆರವಿನೊಂದಿಗೆ ಅನುದಾನವು ಘೋಷಣೆಯಾಗಿದೆ. ಆದರೆ ನಿಗದಿತ ಸ್ಥಳಕ್ಕಿಂತ ಹೆಚ್ಚುವರಿ ಭೂಮಿ ಬೇಕಾಗಿದ್ದು, ಪಕ್ಕದಲ್ಲಿರುವ ಯರಮರಸ್ ದಂಡು ಮತ್ತು ಏಗನೂರು ಗ್ರಾಮಗಳ 108 ಮನೆಗಳನ್ನ ತೆರವುಗೊಳಿಸಬೇಕಿದೆ. ಹೀಗಾಗಿ ಮಂಜೂರಾತಿ ಪಡೆಯದೇ ಸರ್ಕಾರಿ ಜಮೀನಿನಲ್ಲಿ 108 ಮನೆ ನಿರ್ಮಿಸಿದ್ದೀರಿ. 30 ದಿನದೊಳಗೆ ಮನೆಗಳನ್ನ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದೆ. ರಾಯಚೂರು ಸಹಾಯಕ ಆಯುಕ್ತರ ನೋಟಿಸ್ಗೆ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಮನೆ ಖಾಲಿ ಮಾಡುವುದಿಲ್ಲ ಅಂತ ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಸಿಎಂರ ಜನಸ್ಪಂದನವನ್ನು ಅಭಿನಂದಿಸುತ್ತೇನೆ, ಎಲ್ಲವನ್ನು ಟೀಕಿಸಲ್ಲ: ಹೆಚ್ಡಿಕೆ
ಇಲ್ಲಿನ ಬಹುತೇಕ ಮನೆಗಳಿಗೆ 1986-87 ರಲ್ಲಿ ಜಿಲ್ಲಾಡಳಿತ ಹಕ್ಕು ಪತ್ರಗಳನ್ನ ನೀಡಿದೆ. ಹೀಗಾಗಿ ಜನ ನಾವು ವಿಮಾನ ನಿಲ್ದಾಣಕ್ಕೆ ಮೀಸಲಿಟ್ಟ ಸರ್ಕಾರಿ ಜಾಗದಲ್ಲಿಲ್ಲ. ನೀವೇ ಗುರುತಿಸಿಕೊಟ್ಟ ಜಾಗದಲ್ಲಿದ್ದೇವೆ ಅಂತ ಪಟ್ಟು ಹಿಡಿದಿದ್ದಾರೆ. ಇನ್ನೂ ಹಳೇ ಗ್ರಾಮದ ಜನ ನೂರಾರು ವರ್ಷಗಳಿಂದ ವಾಸಿಸುತ್ತಿದ್ದೇವೆ. ಸೂಕ್ತ ಪರಿಹಾರ ಕೊಟ್ಟರೆ ಮನೆ ಖಾಲಿ ಮಾಡಬಹುದು. ಆದರೆ ಜಿಲ್ಲಾಡಳಿತವಾಗಲಿ, ಜನಪ್ರತಿನಿಧಿಗಳಾಗಲಿ ನಮ್ಮ ಕಷ್ಟಕ್ಕೆ ಸ್ಪಂದಿಸದೇ ಮನೆ ಖಾಲಿ ಮಾಡಿ ಅಂತ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸರ್ಕಾರ ಪ್ರತಿ ಮನೆಗೆ ಐದರಿಂದ ಹನ್ನೆರಡು ಲಕ್ಷ ರೂಪಾಯಿ ಪರಿಹಾರ ನೀಡಲು ಮುಂದಾಗಿದೆ. ಆದರೆ ಸರ್ಕಾರ ನೀಡುವ ಪರಿಹಾರದಿಂದ ಬೇರೆಡೆ ಖಾಲಿ ಸೈಟು ಕೊಳ್ಳಲು ಸಹ ಸಾಕಾಗುವುದಿಲ್ಲ ಅಂತ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ವಿಮಾನ ನಿಲ್ದಾಣದ ಪರಿಮಿತಿಯನ್ನ 150 ಅಡಿ ಕಡಿಮೆಗೊಳಿಸಿದರೆ ತಮಗೆ ಅನುಕೂಲವಾಗಲಿದೆ. ಇದಕ್ಕೆ ಸರ್ಕಾರ ಸ್ಪಂದಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣಾ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಕಷ್ಟವನ್ನ ಒಮ್ಮೆ ಕೇಳಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮಕ್ಕಳ ಮಾರಾಟ ಪ್ರಕರಣ; ಯಾರ್ಯಾರಿಗೆ ಯಾವ್ಯಾವ ಪಾತ್ರ? – ಇಲ್ಲಿದೆ ವಿವರ