ಬೆಂಗಳೂರು: ಜೆಡಿಎಸ್ ಅಭ್ಯರ್ಥಿ ಒಂದು ರೀತಿ ದಸರಾದ ಅಂಬಾರಿಯ ಆನೆ ಇದ್ದಂತೆ ಎಂದು ಅನರ್ಹ ಶಾಸಕ ಮುನಿರತ್ನ ವ್ಯಂಗ್ಯವಾಡಿದ್ದಾರೆ.
ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಅವರ ಪರ ಪ್ರಚಾರದ ವೇಳೆ ಮಾತನಾಡಿದ ಅವರು, ವರ್ಷಕ್ಕೊಮ್ಮೆ ದಸರಾ ಅಂಬಾರಿ ಹೊರುವುದಕ್ಕೆ ಆನೆಯನ್ನು ಕರೆದುಕೊಂಡು ಬರುತ್ತಾರೆ. ಬಳಿಕ ದಸರಾ ಮುಗಿದ ಮೇಲೆ ಕಾಡಿಗೆ ಕಳುಹಿಸುತ್ತಾರೆ. ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಅವರ ಪರಿಸ್ಥಿತಿ ಕೂಡ ಅದೇ ಆಗಿದೆ ಎಂದು ಲೇವಡಿ ಮಾಡಿದರು.
ಚುನಾವಣೆ ಸಮಯದಲ್ಲಿ ಜೆಡಿಎಸ್ ನಾಯಕರು ಜವರಾಯಿಗೌಡ ಅವರನ್ನು ಕರೆದುಕೊಂಡು ಬರುತ್ತಾರೆ. ಅವರಿಗೆ ಪಕ್ಷದ ಚಿಹ್ನೆ ಕೊಟ್ಟು, ರೌಂಡ್ ಹೊಡೆಸಿ ಮತ್ತೆ ಅವರನ್ನು ಕೈಬಿಡುತ್ತಾರೆ. ಐದು ವರ್ಷಕೊಮ್ಮೆ ಮೆರವಣಿಗೆ ಮಾಡಿದವವರಿಗೆ ಜನ ಮತ ಹಾಕುವುದಿಲ್ಲ. ಯಶವಂತಪುರ ಕ್ಷೇತ್ರದಲ್ಲಿ ಎಸ್.ಟಿ.ಸೋಮಶೇಖರ್ ನಿತ್ಯವೂ ಅಂಬಾರಿ ಹೊರುತ್ತಾರೆ. ಅವರನ್ನು ಕ್ಷೇತ್ರದ ಜನರು ಆಯ್ಕೆ ಮಾಡುತ್ತಾರೆ ಎಂದು ಹೇಳಿದರು.
ಉಪ ಚುನಾವಣೆಯಲ್ಲಿ ಎಸ್.ಟಿ.ಸೋಮಶೇಖರ್ ಗೆಲುವು ಸಾಧಿಸುತ್ತಾರೆ. ಮತ್ತೆ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಮುನಿರತ್ನ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದಿನ ಚುನಾವಣೆ:
ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಅವರು 2013 ಹಾಗೂ 2018ರ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿ ಎಸ್.ಟಿಸೋಮಶೇಖರ್ ವಿರುದ್ಧ ಸೋತಿದ್ದರು. 2013ರಲ್ಲಿ ಎಸ್.ಸೋಮಶೇಖರ್ 1,20,380 ಮತ ಪಡೆದಿದ್ದರೆ ಜವರಾಯಿಗೌಡ 91,280 ಮತ ಗಳಿಸಿದ್ದರು. ಈ ಮೂಲಕ 29,100 ಮತಗಳ ಅಂತರದಿಂದ ಸೋತಿದ್ದ ಜವರಾಯಿಗೌಡ ಅವರು 2018 ಚುನಾವಣೆಯಲ್ಲಿ ಪ್ರಭಲ ಸ್ಪರ್ಧೆ ನೀಡಿ 10,711 ಮತಗಳಿಂದ ಪರಾಭವಗೊಂಡಿದ್ದರು. ಈ ವೇಳೆ ಎಸ್.ಟಿ.ಸೋಮಶೇಖರ್ 1,15,273 ಮತ ಪಡೆದಿದ್ದರೆ ಜವರಾಯಿ ಗೌಡ 1,04,562 ಮತವನ್ನು ಪಡೆದಿದ್ದರು.
https://www.youtube.com/watch?v=5vkR11RaBS4