ಧಾರವಾಡ: ಹಾವು ಹಿಡಿಯುವವನಿಗೇ ನಾಗರಹಾವು ಕಡಿದ ಘಟನೆ ಧಾರವಾಡದಲ್ಲಿ ನಡೆದಿದೆ.
ಕಳೆದ ಜುಲೈ 9 ರಂದು ಧಾರವಾಡದ ನೆಹರೂನಗರ ನಿವಾಸಿಯಾದ ಉರಗ ತಜ್ಞ ನಾಸಿರ್ ಗಾಂಧಿನಗರದ ಮನೆಯಲ್ಲಿ ಒಂದು ನಾಗರ ಹಾವನನ್ನು ಹಿಡಿದಿದ್ದನು. ಬಳಿಕ ಅದನ್ನು ಅರಣ್ಯದಲ್ಲಿ ಬಿಡಲು ಹೋದ ವೇಳೆ ಆ ಹಾವಿನ ಬಗ್ಗೆ ಕೆಲ ಮಾಹಿತಿ ಹೇಳುವ ಸೆಲ್ಫಿ ವಿಡಿಯೊ ಮಾಡುವಾಗ, ಆ ಹಾವು ಅವನನ್ನು ಕಚ್ಚಿದೆ.
ನಾಲ್ಕು ನಿಮಿಷದ ಸೆಲ್ಫಿ ವಿಡಿಯೋ ಮಾಡುವಾಗ ಸ್ವಲ್ಪ ಅಜಾಗರೂಕತೆ ವಹಿಸಿದ್ದರಿಂದ ನಾಸಿರ್ ಆಸ್ಪತ್ರೆ ಸೇರಿ ಜೀವನ ಮರಣದ ಮಧ್ಯೆ ಹೋರಾಟ ಮಾಡಿ ಈಗ ಬದುಕಿ ಬಂದಿದ್ದಾನೆ. ಸದ್ಯ ಅವನು ಆಸ್ಪತ್ರೆಯಿಂದ ಬಂದ ಮೇಲೆ ಮತ್ತೊಂದು ವಿಡಿಯೋ ಮಾಡಿ, ಹಾವು ಹಿಡಿಯುವುದು ಎಷ್ಟು ಕಷ್ಟ ಎಂದು ವಿಡಿಯೋ ಮಾಡಿದ್ದಾನೆ.
ಹಾವು ಕಡಿದ ದಿನ ಅವನು ಕೇವಲ 5 ನಿಮಿಷದಲ್ಲಿ ಜಿಲ್ಲಾ ಆಸ್ಪತ್ರೆಗೆ ಹೋಗಿದ್ದ, ನಂತರ ಅವನಿಗೆ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಎರಡೂವರೆ ಲಕ್ಷ ಖರ್ಚು ಮಾಡಿ ಉಳಿಸಿ ತರಲಾಗಿದೆ. ಈ ಬಗ್ಗೆ ಆತ ತನ್ನ ವಿಡಿಯೋದಲ್ಲಿ ಹೇಳಿಕೊಂಡಿದ್ದು, ಹಾವು ಬದುಕಿಸಲು ಹೋಗಿ ಆತನೇ ಹಾವಿನ ದವಡೆಗೆ ಸಿಕ್ಕ ಬಗ್ಗೆ ಹೇಳಿದ್ದಾನೆ. ಸದ್ಯ ಅವನು ಹಾವು ಹಿಡಿಯುವುದು ನಿಲ್ಲಿಸಿದ್ದು, ಮುಂದೆ ಇನ್ನು ಸ್ವಲ್ಪ ಸುಧಾರಿಸಿದ ಮೇಲೆ ಮತ್ತೆ ಹಾವನ್ನು ಹಿಡಿಯುವುದಾಗಿ ಹೇಳಿದ್ದಾನೆ.