ಧಾರವಾಡ: ಸಹೋದರರ ಜಗಳವು ಸಾವಿನಲ್ಲಿ ಅಂತ್ಯಕಂಡ ಘಟನೆ ಜಿಲ್ಲೆಯ ಹಾರೋಬೆಳವಡಿ ಗ್ರಾಮದಲ್ಲಿ ನಡೆದಿದೆ.
ಹಾರೋಬೆಳವಡಿ ಗ್ರಾಮದ ಆತ್ಮಾನಂದ ಕಂಬಳಿ (24) ಮೃತ ದುರ್ದೈವಿ. ಶಿವಾನಂದ ಕಂಬಳಿ ಕೊಲೆ ಮಾಡಿದ ಅಣ್ಣ. ಭಾನುವಾರ ತಡರಾತ್ರಿ ಘಟನೆ ನಡೆದಿದ್ದು, ಆರೋಪಿ ಶಿವಾನಂದನನ್ನು ಪೊಲೀಸರು ಬಂಧಿಸಿದ್ದಾರೆ.
- Advertisement 2
ಮದ್ಯ ವ್ಯಸನಿಯಾಗಿದ್ದ ಆತ್ಮಾನಂದ ಭಾನುವಾರ ರಾತ್ರಿಯೂ ಮದ್ಯ ಸೇವಿಸಿ ಮನೆಗೆ ಬಂದಿದ್ದ. ಈ ವೇಳೆ ಪತ್ನಿಯ ಜೊತೆಗೆ ಜಗಳ ಆರಂಭಿಸಿದ್ದ. ಗಲಾಟೆಯನ್ನು ಕೇಳಿ ಮಧ್ಯ ಪ್ರವೇಶಿಸಿದ ಅಣ್ಣ ಶಿವಾನಂದ, ನಿತ್ಯವೂ ಕುಡಿದು ಮನೆಗೆ ಬಂದರೆ ಹೇಗೆ? ಸಂಸಾರ ನಡೆಸುವುದು ಕಷ್ಟವಾಗುತ್ತದೆ ಎಂದು ಆತ್ಮಾನಂದಗೆ ಬುದ್ಧಿ ಹೇಳಿದ್ದಾನೆ. ಆದರೆ ಮಾತಿಗೆ ಮಾತು ಬೆಳೆದು ಬಳಿಕ ಸುಮ್ಮನಾಗಿದ್ದರು.
- Advertisement 3
- Advertisement 4
ಆತ್ಮಾನಂದ ತಡರಾತ್ರಿ ಮತ್ತೆ ಜಗಳ ಆರಂಭಿಸಿದ್ದಾನೆ. ಇದರಿಂದ ಕೋಪಗೊಂಡ ಶಿವಾನಂದ ಕೋಲಿನಿಂದ ತಮ್ಮನ ತಲೆಗೆ ಹೊಡೆದಿದ್ದಾನೆ. ಪರಿಣಾಮ ಬಲವಾದ ಹೊಡೆತದಿಂದಾಗಿ ಆತ್ಮಾನಂದನ ತೆಲೆಯಿಂದ ರಕ್ತ ಸುರಿಯಲು ಆರಂಭಿಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ತಕ್ಷಣವೇ ಕುಟುಂಬಸ್ಥರು ಹಾಗೂ ಸ್ಥಳೀಯರು ಧಾರವಾಡದ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ಆತ್ಮಾನಂದನನ್ನು ಪರೀಕ್ಷಿಸಿದ ವೈದ್ಯರು ಆತ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಶಿವಾನಂದನನ್ನು ಪೊಲೀಸರು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ.