– ಚೀನಾ ವಿಜ್ಞಾನದಲ್ಲಿ ಮುಂದೆ ಬರುವುದನ್ನು ನೋಡಿದ್ರೆ ಭಯವಾಗುತ್ತೆ
ಧಾರವಾಡ: ವಿಜ್ಞಾನದಲ್ಲಿ ಚೀನಾ ದೇಶ ಮುಂದೆ ಬಂದಿರುವುದನ್ನು ನೋಡಿದರೆ ತುಂಬಾ ಭಯ ಆಗುತ್ತದೆ. ಚೀನಾ ವಿಜ್ಞಾನದ ಮೂಲಕವೇ ಮುಂದೇ ಬರುತ್ತಿದೆ ಎಂದು ಹಿರಿಯ ವಿಜ್ಞಾನಿ ಭಾರತ ರತ್ನ ಡಾ. ಸಿಎನ್ಆರ್ ರಾವ್ ಹೇಳಿದ್ದಾರೆ.
ಧಾರವಾಡದಲ್ಲಿ ನಡೆದ ಕರ್ನಾಟಕ ಪ್ರೌಢಶಾಲೆ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಅರ್ಥಶಾಸ್ತ್ರ, ಸೈನ್ಯ ಬೆಳೆಸುವುದಕ್ಕಿಂತ ವಿಜ್ಞಾನದಲ್ಲಿ ಮುಂದೆ ಬರಬೇಕು. ಚೀನಾಗೆ ವಿಜ್ಞಾನ ವಿಚಾರದಲ್ಲಿ ಹುಚ್ಚು ಬಂದು ಬಿಟ್ಟಿದೆ. ಎಲ್ಲಿ ಹೋದರೂ ಚೀನಾ ಇದೆ, ನಾನು ಜಗತ್ತಿನಲ್ಲಿ ಯಾವುದೇ ಕಾಲೇಜ್, ವಿಶ್ವವಿದ್ಯಾಲಯಕ್ಕೆ ಹೋದರೂ ಅಲ್ಲಿ ಚೀನಾ ಇದೆ ಎಂದು ಹೇಳಿದ ಅವರು, ಸಾವಿರಾರು ಜನ ವಿಜ್ಞಾನಿಗಳು ಅಲ್ಲಿಂದ ಬರುತ್ತಾರೆ ಎಂದರು.
ಇದನ್ನು ನೋಡಿದಾಗ ಅಯ್ಯೋ ರಾಮ ಇವರು ಈ ತರಹ ಬೆಳೆಯುತ್ತಿದ್ದರೆ ನಮ್ಮ ದೇಶಕ್ಕೆ ಭವಿಷ್ಯ ಇದೆಯಾ ಅನಿಸುತ್ತೆ ಎಂದ ರಾವ್, ಅಮೇರಿಕಾ, ಜಪಾನ್, ಚೀನಾಗಳನ್ನು ಮೀರಿ ನಾವು ಇಂದು ಜಗತ್ತಿನಲ್ಲಿ ಒಳ್ಳೆ ವಿಜ್ಞಾನಿಯಾಗಬೇಕಿದೆ. ಇನ್ನು ಅವರನ್ನು ಮೀರಿಸಿ ಇಲ್ಲವೇ ಅವರಿಗೆ ಸಮಾನವಾಗಿ ಭಾರತದ ವಿಜ್ಞಾನಿ ಬೆಳೆಯಬೇಕಾದರೆ ಬಹಳ ಕಷ್ಟ ಇದೆ. ನಾವೆಲ್ಲ ರಾಜಕೀಯವಾಗಿ ಭಾಷಣ ಮಾಡಬಹುದು, ಆದರೆ ಭಾರತ ಮುಂದೆ ಬರಬೇಕಾದರೆ ವಿಜ್ಞಾನದಲ್ಲಿ ಮುಂದೆ ಬರಬೇಕಿದೆ ಎಂದು ಹೇಳಿದರು.