ಹುಬ್ಬಳ್ಳಿ: ಕೆಲವು ಕಿಡಿಕೇಡಿಗಳು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ನಟ ಧನ್ವೀರ್ ಆರೋಪಿಸಿದ್ದಾರೆ.
ಅಭಿಮಾನಿಯ ಮೇಲೆ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಕೆಲವು ಕಿಡಿಕೇಡಿಗಳು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಯಾರು ಮಾಡುತ್ತಿದ್ದಾರೆ ಅಂತ ನನಗೆ ಗೊತ್ತು. ಘಟನೆ ಬಗ್ಗೆ ಎಲ್ಲಾ ಸಾಕ್ಷಿಗಳನ್ನು ಸಂಗ್ರಹಿಸುತ್ತಿದ್ದೇನೆ. ಎಲ್ಲದಕ್ಕೂ ಬೆಂಗಳೂರಿನಲ್ಲಿ ಉತ್ತರ ನೀಡುತ್ತೇನೆ ಅಂತ ಯುವ ನಟ ಧನ್ವೀರ್ ಹೇಳಿಕೆ ನೀಡಿದ್ದಾರೆ.
ನಾನು ಸದ್ಯ ಬೈಟು ಲವ್ ಚಿತ್ರದ ಪ್ರಚಾರದಲ್ಲಿದ್ದೇನೆ. ಇದರ ಬಗ್ಗೆ ಮಾತ್ರ ಗಮನ ಹರಿಸುತ್ತೇನೆ. ಹಲ್ಲೆಯ ಘಟನೆ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಎಲ್ಲಾ ಪ್ರಶ್ನೆಗೆ ಉತ್ತರ ನೀಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಬೈ ಟು ಲವ್ ಹೀರೋ ಧನ್ವೀರ್ ಮೇಲೆ ದೂರು ದಾಖಲಿಸಿದ ಅಭಿಮಾನಿ
ಇತ್ತೀಚೆಗಷ್ಟೇ ಧನ್ವೀರ್ ಮತ್ತು ಅವರ ಬೌನ್ಸರ್ ಸೇರಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅಭಿಮಾನಿಯೊಬ್ಬರು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನೂ ಓದಿ: ಸ್ಟಾರ್ ಸುವರ್ಣದಲ್ಲಿ ‘ಜೇನುಗೂಡು’ ಪ್ರೇಮಕಾವ್ಯ ಫೆ.21ರಂದು ತೆರೆಗೆ
ಗುರುವಾರ (ಫೆ.17) ತಡರಾತ್ರಿ ಬೆಂಗಳೂರಿನ ಎಸ್.ಸಿ ರಸ್ತೆಯ ಅನುಪಮಾ ಚಿತ್ರಮಂದಿರದ ಬಳಿ ಧನ್ವೀರ್ ಮತ್ತು ಅವರ ಅಂಗರಕ್ಷರಿದ್ದರು. ತಡರಾತ್ರಿ ಊಟ ಮುಗಿಸಿಕೊಂಡು ಅದೇ ರಸ್ತೆಯಲ್ಲೇ ಹೊರಟಿದ್ದ ಚಂದ್ರಶೇಖರ್, ನೆಚ್ಚಿನ ನಟನನ್ನು ಕಂಡು ಒಂದು ಫೋಟೋ ಕೇಳಿದ್ದಾರೆ. ಸೆಲ್ಫಿ ಕೊಡಲು ಧನ್ವೀರ್ ನಿರಾಕರಿಸಿದರು ಎನ್ನಲಾಗಿದೆ. ಹಾಗಾಗಿ ಕೋಪಗೊಂಡ ಅಭಿಮಾನಿ ಮತ್ತೆ ಮತ್ತೆ ಫೋಟೋಗಾಗಿ ಪೀಡಿಸಿದ್ದಾನೆ. ಯಾವುದೇ ಕಾರಣಕ್ಕೂ ಅಭಿಮಾನಿಯ ಬೇಡಿಕೆಗೆ ಸ್ಪಂದಿಸದೇ ಇರುವ ಕಾರಣಕ್ಕಾಗಿ ಅಭಿಮಾನಿ ಮತ್ತು ಧನ್ವೀರ್ ಅವರ ಅಂಗರಕ್ಷಕರ ನಡುವೆ ಮಾತಿನ ಸಮರವೇ ನಡೆದು, ಆನಂತರ ಅಭಿಮಾನಿ ಮೇಲೆ ಹಲ್ಲೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.