ರಾಮನಗರ: ಸರ್ಕಾರಿ ಆಸ್ಪತ್ರೆಯೊಂದರಲ್ಲಿ (Government Hospital) ವೈದ್ಯೆಯರು (Doctor) ಬಾಣಂತಿ ಡಿಸ್ಚಾರ್ಜ್ಗೆ ಲಂಚದ ಬೇಡಿಕೆಯಿಟ್ಟ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೇವೆ ಸಿಗುತ್ತೆ ಎಂದು ತೆರಳುವ ಬಡವರಿಗೆ ಧನದಾಹಿ ವೈದ್ಯರಿಂದ ಕಿರುಕುಳ ಮಾತ್ರ ತಪ್ಪಿಲ್ಲ. ಆಸ್ಪತ್ರೆಗೆ ದಾಖಲಾಗುವ ರೋಗಿ ಹಣ ನೀಡಲೇಬೇಕು, ಅದು ಅವರು ಕೇಳಿದಷ್ಟು ಲಂಚ ಕೊಡಲೇಬೇಕಂತೆ. ಬಿಡದಿಯ (Bidadi) ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಿತ್ಯ ಇದೇ ರೀತಿಯ ಕರ್ಮಕಾಂಡ ನಡೆಯುತ್ತಿದೆ. ಆಸ್ಪತ್ರೆ ವೈದ್ಯರಾದ ಡಾ. ಶಶಿಕಲಾ ಮತ್ತು ಡಾ. ಐಶ್ವರ್ಯ ರೋಗಿಯ ಪೋಷಕರಿಂದ ಹಣ ಡಿಮ್ಯಾಂಡ್ ಮಾಡ್ತಾ ಇರುವ ವೀಡಿಯೋ ಈಗ ಸಖತ್ ವೈರಲ್ ಆಗಿದೆ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.
ಬಿಡದಿಯ ನಿಂಗೇಗೌಡನ ದೊಡ್ಡಿಯ ಮಂಜಪ್ಪ ಅವರು ಅವರ ಪತ್ನಿಯನ್ನು ಬಿಡದಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಹಣದ ಬೇಡಿಕೆ ಇಟ್ಟಿದ್ದ ವೈದ್ಯರಿಗೆ ಎರಡು ಸಾವಿರ ಹಣ ನೀಡಲು ಹೋಗಿದ್ದಾರೆ. ಆದರೆ ಆ ವೈದ್ಯರು ಕೊಟ್ಟಷ್ಟು ಹಣವನ್ನು ಒಪ್ಪಿಕೊಳ್ಳದೇ ಸತಾಯಿಸಿದ್ದರು. ಮೇಲಿನ ವೈದ್ಯರಿಗೆ ಎರಡು ಸಾವಿರ ರೂ. ನನಗೆ ಎರಡು ಸಾವಿರ ರೂ. ಮತ್ತೊಬ್ಬ ವೈದ್ಯರಿಗೆ ಎರಡು ಸಾವಿರ ರೂ. ಹಂಚಬೇಕು ಎಂದು ಡಾ ಶಶಿಕಲಾ ಹೇಳಿರೋದು ಮೊಬೈಲ್ನಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ದೇಶದಲ್ಲೇ ಅಪಖ್ಯಾತಿ ಹೊಂದಿದ್ದ ನಿಮ್ಮಿಂದ ಪಾಠ ಕಲಿಯಬೇಕಿಲ್ಲ – ಅಮಿತ್ ಶಾ ವಿರುದ್ಧ ಓವೈಸಿ ಕಿಡಿ
ಈಕೆಗೆ ಸಾಥ್ ನೀಡಿರೋದು ಅಲ್ಲಿನ ಮತ್ತೊಬ್ಬ ವೈದ್ಯೆ ಡಾ. ಐಶ್ವರ್ಯ. ನಿಮ್ಮೊಬ್ಬರ ಬಳಿ ಎರಡು ಸಾವಿರ ರೂ. ಪಡೆದುಕೊಂಡ್ರೆ ವಾರ್ಡ್ನಲ್ಲಿ ದಾಖಲಾಗಿರುವ ಎಲ್ಲರೂ ಹಾಗೆ ಮಾಡ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಪಾದಯಾತ್ರೆಯಲ್ಲಿ ಮುಗ್ಗರಿಸಿ ಬಿದ್ದ ದಿಗ್ವಿಜಯ್ ಸಿಂಗ್
ಇನ್ನೂ ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗುತ್ತಿದ್ದಂತೆಯೇ ಎಚ್ಚೆತ್ತ ಜಿಲ್ಲಾ ಆರೋಗ್ಯಾಧಿಕಾರಿ ಕಾಂತರಾಜು ಅವರು ಇಬ್ಬರು ವೈದ್ಯ ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ. ಈ ಬಗ್ಗೆ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದ್ದನ್ನ ಗಮನಿಸಿದ್ದೇವೆ. ಬಳಿಕ ವೀಡಿಯೋ ಸಂಪೂರ್ಣವಾಗಿ ಪರಿಶೀಲಿಸಿ ಇಬ್ಬರನ್ನು ಅಮಾನತು ಮಾಡಿ ತನಿಖೆಗೆ ಒಳಪಡಿಸಿದ್ದೇವೆ ಎಂದು ಹೇಳಿದ್ದಾರೆ.