ಮುಂಬೈ: ನವರಾತ್ರಿ ಹಬ್ಬದಲ್ಲಿ ದುರ್ಗಾ ಪೂಜೆಯ ಕೊನೆಯ ದಿನವನ್ನು ವಿಜಯದಶಮಿ ಎಂದು ಕರೆಯಲಾಗುತ್ತದೆ.
ಈ ದಿನ ಕೆಟ್ಟದ್ದರ ವಿರುದ್ಧ ಒಳ್ಳೆಯದು ವಿಜಯ ಸಾಧಿಸುವುದನ್ನು ಸೂಚಿಸುತ್ತದೆ. ದೇಶಾದ್ಯಂತ ಈ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ ಮತ್ತು ರಾವಣ, ಮೇಘನಾಥ ಮತ್ತು ಕುಂಭಕರ್ಣನ ಪ್ರತಿಕೃತಿಗಳನ್ನು ಸುಡಲಾಗುತ್ತದೆ. ಇದನ್ನೂ ಓದಿ: ಜನಸಂಖ್ಯಾ ಅಸಮತೋಲನ ತಡೆಗೆ ಹೊಸ ನೀತಿ ಜಾರಿಗೊಳಿಸಬೇಕು: ಮೋಹನ್ ಭಾಗವತ್
ದಸರಾದ ಈ ಶುಭ ಸಂದರ್ಭದಲ್ಲಿ, ಪುಣೆಯ ಸರಸ್ಬಾಗ್ನ ಮುಂಭಾಗದಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನವು ಭಾರೀ ಸದ್ದು ಮಾಡುತ್ತಿದೆ. ಏಕೆಂದರೆ ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ದೇವಸ್ಥಾನದಲ್ಲಿರುವ ಮಹಾಲಕ್ಷ್ಮಿ ದೇವಿ ವಿಗ್ರಹಕ್ಕೆ 16 ಕೆಜಿ ಚಿನ್ನದ ಸೀರೆಯನ್ನು ಉಡಿಸಲಾಗುತ್ತದೆ. ಹೌದು, 2011 ರಲ್ಲಿ ಭಕ್ತರೊಬ್ಬರು ದೇವಸ್ಥಾನದ ಟ್ರಸ್ಟಿಗೆ ಈ ಚಿನ್ನದ ಸೀರೆಯನ್ನು ದಾನ ಮಾಡಿದ್ದು, ಅದನ್ನು ದಕ್ಷಿಣ ಭಾರತದಲ್ಲಿ ಚಿನ್ನದ ಕೆಲಸಗಾರರಿಂದ ತಯಾರಿಸಲಾಗಿದೆ ಎಂದು ತಿಳಿಸಿದ್ದಾರೆ. ಭಕ್ತ ಈ ಸೀರೆಯನ್ನು ದೇವಿಗೆ ಕಾಣಿಕೆಯಾಗಿ ಕೊಟ್ಟಿದ್ದಾರೆ.
ಪ್ರತಿವರ್ಷ ನವರಾತ್ರಿ ಮತ್ತು ದೀಪಾವಳಿಯ ಶುಭ ದಿನಗಳಲ್ಲಿ ಮಹಾಲಕ್ಷ್ಮಿ ದೇವಿಯನ್ನು ಚಿನ್ನದ ಆಭರಣ ಮತ್ತು ಸೀರೆಯಿಂದ ಅಲಂಕರಿಸಲಾಗುತ್ತದೆ. ದೇವಿಯು ಧರಿಸಿದ ಸೀರೆಯ ತೂಕವು 16 ಕೆಜಿಯಷ್ಟು ಭಾರವಿದೆ. ದೇವಸ್ಥಾನವು ಕಟ್ಟುನಿಟ್ಟಾದ ನಿಯಮಗಳನ್ನು ಅನುಸರಿಸುತ್ತಿದ್ದು, ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಜನದಟ್ಟಣೆಯ ಸಮಸ್ಯೆಯ ಬಗ್ಗೆ ಸರಿಯಾದ ಕಾಳಜಿ ವಹಿಸಲಾಗಿದೆ. ಇದನ್ನೂ ಓದಿ: ಭಯ ಹುಟ್ಟಿಸಲು ಉಗ್ರರು ಹತ್ಯೆಯನ್ನು ಗುರಿಯಾಗಿಸಿಕೊಂಡಿದ್ದಾರೆ: ಮೋಹನ್ ಭಾಗವತ್
ಭವ್ಯವಾದ ಮೂರ್ತಿಯ ದರ್ಶನಕ್ಕಾಗಿ ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಇದಲ್ಲದೆ, ಮಹಾಲಕ್ಷ್ಮಿ ದೇವಾಲಯದ ದೀಪಾಲಂಕಾರ ಕೂಡ ಅದ್ಭುತವಾಗಿದೆ.