ಚಿಕ್ಕಮಗಳೂರು: ಜಾರಿ ನಿರ್ದೇಶನಾಲಯ(ಇಡಿ) ಪ್ರಕರಣದಿಂದ ಹೊರಬಂದ ಬಳಿಕ ಟೆಂಪಲ್ ರನ್ ಮಾಡುತ್ತಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಇಂದು ಕುಟುಂಬದ ಜೊತೆ ಶೃಂಗೇರಿ ಶಾರದಾಂಬೆಯ ದರ್ಶನ ಪಡೆದಿದ್ದಾರೆ.
ಡಿಕೆಶಿ ಅವರು ಪತ್ನಿ ಉಷಾ, ಪುತ್ರಿ ಐಶ್ವರ್ಯ ಜೊತೆ ಚಿಕ್ಕಮಗಳೂರಿನ ಶೃಂಗೇರಿಗೆ ಬಂದು ಶಾರದಾಂಬೆಯ ದರ್ಶನ ಪಡೆದಿದ್ದಾರೆ. ಶಾರದಾಂಬೆ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ತಾಯಿಗೆ ನಮಿಸಿದ್ದಾರೆ. ಈ ವೇಳೆ ಮುಖ್ಯಮಂತ್ರಿಯಾಗೇ ಮತ್ತೆ ಬರಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಡಿಕೆಶಿ ಅವರಿಗೆ ಶುಭಹಾರೈಸಿದ್ದಾರೆ. ಶಾರದಾಂಬೆಗೆ ಪೂಜೆ ಸಲ್ಲಿಸಿದ ಬಳಿಕ ಡಿಕೆಶಿ ಹಾಗೂ ಪತ್ನಿ, ಮಗಳು ಜಗದ್ಗುರುಗಳ ಆಶೀರ್ವಾದ ಪಡೆದಿದ್ದಾರೆ.
ಡಿಕೆಶಿ ಶಾರದಾಂಬೆ ದೇವಾಲಯದ ಪ್ರದಕ್ಷಿಣೆ ಹಾಕುತ್ತಿದ್ದ ವೇಳೆ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು. ‘ಸರ್ ನಂಗೊಂದು ಸೆಲ್ಫಿ, ನಂಗೊಂದು ಸೆಲ್ಫಿ’ ಅಂತ ಡಿಕೆಶಿ ಹಿಂದೆ ಅಭಿಮಾನಿಗಳು ಬಿದ್ದಿದ್ದರು. ಕೊನೆಗೆ ಎಲ್ಲರಿಗೂ ಸೆಲ್ಫಿ ತೆಗೆದುಕೊಳ್ಳಲು ಡಿಕೆಶಿ ಅವಕಾಶ ಮಾಡಿಕೊಟ್ಟರು. ಈ ವೇಳೆ ಡಿಕೆಶಿ ಅವರಿಗೆ ಸ್ಥಳೀಯ ಶಾಸಕ ರಾಜೇಗೌಡ ಸಾಥ್ ನೀಡಿದ್ದರು.