ಬೀದರ್: ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಜಮಖಂಡಿ ಬಳಿ ಕ್ರೂಸರ್ ವಾಹನ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.
ಮಹಾರಾಷ್ಟ್ರದ – ಲಾತೂರ್ – ಬೀದರ್ ಸಂಪರ್ಕ ಕಡಿತಗೊಂಡಿದ್ದು, ಭಾಲ್ಕಿ ತಾಲೂಕಿನ ಜಮಖಂಡಿ ಬಳಿ ಸೇತುವೆ ದಾಟಲು ಯತ್ನಿಸಿದ್ದ ವೇಳೆ ಕ್ರೂಸರ್ ವಾಹನ ಕೊಚ್ಚಿಕೊಂಡು ಹೋಗಿದೆ.
ಸೇತುವೆ ಮೇಲೆ ನೀರು ರಭಸದಿಂದ ಹರಿಯುತ್ತಿದ್ದರೂ ಚಾಲಕ ಧೈರ್ಯಮಾಡಿ ಕ್ರೂಸರ್ ವಾಹನವನ್ನು ಚಲಾಯಿಸಿದ್ದಾನೆ. ಅರ್ಧ ಸಾಗುತ್ತಿದ್ದಂತೆ ನೀರಿನ ರಭಸಕ್ಕೆ ನಿಯಂತ್ರಣಕ್ಕೆ ಸಿಗದೇ ಕ್ರೂಸರ್ ಹಳ್ಳಕ್ಕೆ ಬಿದ್ದಿದೆ. ಬಿದ್ದ ಕೂಡಲೇ ಅದರಲ್ಲಿದ್ದ ಪ್ರಯಾಣಿಕರು ಡೋರು ತೆಗೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಳ್ಳದಲ್ಲಿ ಕೋಚ್ಚಿ ಹೋದ ವಾಹನ ಹೊರಗಡೆ ತೆಗೆಯಲು ಸಾರ್ವಜನಿಕರು ಹರಸಾಹಸ ಪಟ್ಟಿದ್ದಾರೆ. ಭಾರೀ ಮಳೆ ಅವಾಂತರಕ್ಕೆ ನೆರೆ ರಾಜ್ಯಕ್ಕೆ ಹೋಗುವ ಪ್ರಯಾಣಿಕರು ಮತ್ತು ವಾಹನ ಸವಾರರು ಪರದಾಡುತ್ತಿದ್ದಾರೆ. ಮುಂಗಾರು ಮಳೆಗೆ ಭಾನುವಾರದಿಂದ ಜಿಲ್ಲೆಯ ಹಲವು ಸೇತುವೆಗಳ ಸಂಪರ್ಕ ಕಡಿತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.