ಹುಬ್ಬಳ್ಳಿ: ವಿದ್ಯಾನಗರದಲ್ಲಿರುವ ಉತ್ತರ ವಲಯದ ಉಪ ನೋಂದಣಾಧಿಕಾರಿ ಕಚೇರಿಯ ಉಪ ನೋಂದಣಾಧಿಕಾರಿಗಳಾದ ಸೌಮ್ಯಲತಾ ಮತ್ತು ಪ್ರತಿಭಾ ಬೀಡಿಕರ ಅವರ ಮೇಲೆ ಶಿಸ್ತುಕ್ರಮ ಕೈಗೊಂಡು ಅವರನ್ನು ತುರ್ತಾಗಿ ಬೇರೆ ಕಡೆ ವರ್ಗಾಯಿಸುವಂತೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಪತ್ರ ಬರೆದಿದ್ದಾರೆ.
ಇಬ್ಬರೂ ನೋಂದಣಾಧಿಕಾರಿಗಳು ಸಾರ್ವಜನಿಕರೊಂದಿಗೆ ಅನುಚಿತವಾಗಿ ನಡೆದುಕೊಳ್ಳುತ್ತಿದ್ದಾರೆ. ಕಚೇರಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ನೋಂದಣಿ ಕಾರ್ಯಕ್ಕೆ ಬರುವವರನ್ನು ವಾರಗಟ್ಟಲೇ ಓಡಾಡಿಸುತ್ತ ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ನೀನು ಮಹಿಳೆ ಉದ್ಯೋಗ ಮಾಡುವಂತಿಲ್ಲ, ಮನೆಗೆ ತೆರಳು – ಮಹಿಳಾ ಪತ್ರಕರ್ತೆಗೆ ಗೇಟ್ಪಾಸ್
ಇವರು ಏಜೆಂಟ್ ಮೂಲಕ ಹೆಚ್ಚಿನ ಹಣ ಪಡೆಯುತ್ತಿದ್ದು, ಕಚೇರಿಯಲ್ಲಿ ಮೂಲ ಸೌಲಭ್ಯಗಳಿಲ್ಲ. ಸಾರ್ವಜನಿಕರು 7-8 ಗಂಟೆಗಟ್ಟಲೇ ನಿಂತು ಸುಸ್ತಾಗಿ ತತ್ತರಿಸಿ ಹೋಗುತ್ತಿದ್ದರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಕ್ರೆಡೈ ಸಂಸ್ಥೆ, ಬಾಂಡ್ ರೈಟರ್ ಅಸೋಸಿಯೇಶನ್, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಇಂಜಿನಿಯರ್ ಅಸೋಸಿಯೇಶನ್ ಸಾರ್ವಜನಿಕರ ಗ್ರಾಹಕರ ವೇದಿಕೆ, ವಕೀಲ ಸಂಘದ ಸದಸ್ಯರು ಹಾಗೂ ಇತರರು ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದರು. ಇದನ್ನೂ ಓದಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ತಡೆಯಿಲ್ಲ
ಪ್ರತಿಭಟನೆಯ ಜೊತೆ ದೂರುಗಳು ಬರುವ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಬ್ಬರೂ ಉಪ ನೋಂದಣಾಧಿಕಾರಿಗಳನ್ನು ಬೇರೆಡೆ ವರ್ಗಾಯಿಸಿ, ಸಮಸ್ಯೆಗಳನ್ನು ಬಗೆಹರಿಸುವಂತೆ ಪತ್ರದ ಮೂಲಕ ಆಗ್ರಹಿಸಿದ್ದಾರೆ.