ತುಮಕೂರು: ಉಪಚುನಾವಣೆಯಲ್ಲಿ ಕಾಂಗ್ರೆಸ್ಸನ್ನ ಕಾಂಗ್ರೆಸಿಗರೇ ಸೋಲಿಸಿದ್ದಾರೆ ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್ ಅವರ ಆಪ್ತ, ಕಾಂಗ್ರೆಸ್ ಮುಖಂಡ ಕೆಂಚಮಾರಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸನ್ನ ಬಿಜೆಪಿಯವರು, ಜೆಡಿಎಸ್ನವರು ಸೋಲಿಸಿಲ್ಲ. ಬದಲಾಗಿ ಕಾಂಗ್ರೆಸಿಗರೇ ಸೋಲಿಸಿದ್ದಾರೆ ಎಂದು ಕೆಲ ಕಾಂಗ್ರೆಸ್ ನಾಯಕರ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮಾತನಾಡಿದ ಕೆಂಚಮಾರಯ್ಯ ಅವರು, ಕೇಂದ್ರ ಸರ್ಕಾರ ಒಂದು ಸಮುದಾಯವನ್ನ ತುಳಿಯುವ ನಿಟ್ಟಿನಲ್ಲಿ ಈ ಕಾನೂನು ತಂದಿದೆ ಎಂದರು.
ಪಾಕಿಸ್ತಾನ ತನ್ನದು ಮುಸ್ಲಿಂ ರಾಷ್ಟ್ರ ಎಂದು ಘೋಷಿಸಿಕೊಂಡಿದೆ. ಹೀಗಾಗಿ ಅಲ್ಲಿ ಅಲ್ಪಸಂಖ್ಯಾತರಾಗಿದ್ದ ಹಿಂದೂಗಳನ್ನ ಅವರು ಯಾವ ರೀತಿ ನಡೆದುಕೊಂಡಿದ್ದಾರೆ ಅನ್ನೋದು ಮುಖ್ಯವಲ್ಲ. ಆದರೆ ನಮ್ಮದು ಜಾತ್ಯಾತೀತ ರಾಷ್ಟ್ರ, ಎಲ್ಲಾ ಧರ್ಮಿಯರನ್ನೂ ಸಮಾನವಾಗಿ ಕಾಣಬೇಕು ಎಂದು ಹೇಳುವ ಮೂಲಕ ಪೌರತ್ವ ಕಾಯ್ದೆಯನ್ನು ಟೀಕಿಸಿದರು.