ಬೆಂಗಳೂರು: ಲೋಕಸಭಾ ಚುನಾವಣಾ ಸೋಲಿನ ಬಳಿಕ ಕರ್ನಾಟಕದಲ್ಲಿ ಪಕ್ಷವನ್ನು ಮತ್ತಷ್ಟು ಬಲ ಪಡಿಸಲು ಮುಂದಾಗಿರುವ ಹೈಕಮಾಂಡ್ ರಾಜ್ಯ ಕಾಂಗ್ರೆಸ್ಗೆ ಮೇಜರ್ ಸರ್ಜರಿಗೆ ಮುಂದಾಗಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಹೊಸ ತಂತ್ರದ ಮೂಲಕ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಪಕ್ಷಕ್ಕೆ ಹೊಸ ಶಕ್ತಿ ತುಂಬಲು ದೆಹಲಿ ನಾಯಕರು ಮುಂದಾಗಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಬಲ ಪಡಿಸಲು ಮೂವರ ನಾಯಕರ ಜವಾಬ್ದಾರಿಯಲ್ಲಿ ಬದಲಾವಣೆ ಮಾಡುವ ನಿರ್ಧಾರವನ್ನು ಮಾಡಲಾಗಿದೆ ಎನ್ನಲಾಗಿದ್ದು, ಪ್ರಮುಖವಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಡಿಕೆ ಶಿವಕುಮಾರ್ ಹೆಗಲಿಗೆ ಹೊಸ ಜವಾಬ್ದಾರಿ ವಹಿಸುವ ಸಾಧ್ಯತೆ ಇದೆ.
ಪಕ್ಷದ ಹಿರಿಯ ನಾಯಕರಾಗಿರುವ ಮಲ್ಲಿಕಾರ್ಜನ ಅವರಿಗೆ ರಾಜ್ಯದ ಜವಾಬ್ದಾರಿಯ ನೀಡುವ ಕುರಿತು ಈಗಾಗಲೇ ಹೈಕಮಾಂಡ್ ಗಂಭೀರ ಚರ್ಚೆ ನಡೆಸಿದೆ ಎಂಬ ಮಾಹಿತಿ ಲಭಿಸಿದೆ. ಈಗಾಗಲೇ ಸಿಎಂ ರೇಸ್ ನಲ್ಲಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪಕ್ಷದ ಜವಾಬ್ದಾರಿ ವಹಿಸಿ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರಿಗೆ ನೀಡಿರುವ ಪಕ್ಷದ ಜವಾಬ್ದಾರಿಗಳನ್ನು ಬದಲಿಸುವ ಕಾರ್ಯಕ್ಕೆ ಹೈಕಮಾಂಡ್ ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೈತ್ರಿ ಪಕ್ಷಗಳ ಸಮನ್ವಯ ಸಮಿತಿಯ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿ ಪಕ್ಷವನ್ನು ಕಟ್ಟುವ ಕಾರ್ಯಕ್ಕೆ ಮುಂದಾಗುವಂತೆ ಮಾಡುವುದು. ಸಚಿವ ಡಿಕೆ ಶಿವಕುಮಾರ್ ಅವರನ್ನು ಸಿಎಲ್ಪಿ ನಾಯಕ ಸ್ಥಾನ ನೀಡಲು ಹೈಕಮಾಂಡ್ ಪ್ರಮುಖ ಚಿಂತನೆ ಆಗಿದೆ. ಕೇಂದ್ರದಲ್ಲಿ ಸರ್ಕಾರ ಯಶಸ್ವಿಯಾಗಿ ಜವಾಬ್ದಾರಿಯನ್ನ ನಿರ್ವಹಿಸಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿದ್ದರಾಮಯ್ಯ ಅವರಿಂದ ತೆರವಾಗುವ ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನ ನೀಡಿ ಸರ್ಕಾರ ಸುಗಮವಾಗಿ ನಡೆಯಲು ಅನುವು ಮಾಡಿಕೊಡುವ ಪ್ಲಾನ್ ಕಾಂಗ್ರೆಸ್ ನಾಯಕರ ಮುಂದಿದೆ ಎನ್ನಲಾಗುತ್ತಿದೆ.
ಹೈಕಮಾಂಡ್ ಈ ಜವಾಬ್ದಾರಿಗಳನ್ನು ನೀಡಲು ಜಾತಿ ಸಮೀಕರಣವನ್ನು ಮಾಡಿದ್ದು, ಭಾರೀ ಮಾಸ್ ಫಾಲೋಯಿಂಗ್ ಹೊಂದಿರುವ ನಾಯಕರಿಗೆ ಜವಾಬ್ದಾರಿ ನೀಡುವ ಚಿಂತನೆ ನಡೆದಿದೆ. ಮುಂದಿನ ವಿಧಾನ ಸಭೆ ಚುನಾವಣೆ ಹೈಕಮಾಂಡ್ ಗುರಿಯಾಗಿದ್ದು, ಸರ್ಕಾರದ ರಚನೆ ಮಾಡುವ ಜವಾಬ್ದಾರಿಯನ್ನ ಈಗಲೇ ವಹಿಸಿ, ಅದರೊಂದಿಗೆ ಸೂಕ್ತ ಸ್ಥಾನಮಾನ ನೀಡುಲು ಚಿಂತನೆ ನಡೆದಿದೆ.