– ಮೇ 26 ರಂದು ದೆಹಲಿಗೆ ಬರುವಂತೆ ಡಿಕೆಶಿ, ಸಿದ್ದರಾಮಯ್ಯಗೆ ಕರೆ
– ಮಂಗಳವಾರ ಯಾರಿಗೆ ಮಂಗಳ ಯಾರಿಗೆ ಅಮಂಗಳ?
ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ನಡುವಿನ ಕುರ್ಚಿ ಕಾಳಗ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಶೀತಲ ಸಮರ ಕೇವಲ ರಾಜ್ಯ ರಾಜಕಾರಣಕ್ಕೆ ಸೀಮಿತವಾಗಿಲ್ಲ. ಇದರ ಪ್ರತಿಧ್ವನಿ ರಾಷ್ಟ್ರ ರಾಜಧಾನಿ ದಿಲ್ಲಿಯವರೆಗೂ ತಲುಪಿದೆ. ರಾಜ್ಯ ಕಾಂಗ್ರೆಸ್ನ ಈ ಪವರ್ ಶೇರಿಂಗ್ ಗೊಂದಲದ ನಡುವೆ ಸಿಎಂ, ಡಿಸಿಎಂ ಇಬ್ಬರಿಗೂ ಹೈಕಮಾಂಡ್ ಬುಲಾವ್ ನೀಡಿದೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರಿಗೂ ಹೈಕಮಾಂಡ್ ಬುಲಾವ್ ನೀಡಿದ್ದು, ಮೇ 26 ರ ಮಂಗಳವಾರ ಉಭಯ ನಾಯಕರು ದೆಹಲಿಗೆ ತೆರಳಲಿದ್ದಾರೆ. ಅಂದು ರಾಹುಲ್ ಗಾಂಧಿ (Rahul Gandhi) ಅವರನ್ನ ಭೇಟಿಯಾಗಲಿದ್ದು, ಕುರ್ಚಿ ಕದನಕ್ಕೆ ಬ್ರೇಕ್ ಬೀಳಲಿದೆಯಾ ಎಂಬುದನ್ನು ಕಾದುನೋಡಬೇಕಿದೆ.

ಮೇ ಕ್ರಾಂತಿಯ ಲೆಕ್ಕಾಚಾರದ ನಡುವೆ ಮೇ ತಿಂಗಳ ಅಂತ್ಯದಲ್ಲಿ ಇಬ್ಬರಿಗೂ ಹೈಕಮಾಂಡ್ ಕರೆ ನೀಡಿದೆ. ಇದು ಪವರ್ ಶೇರಿಂಗ್ ಲೆಕ್ಕಾಚಾರವಾ ಅಥವಾ ನಾಯಕತ್ವ ಬದಲಾವಣೆ ಗೊಂದಲಕ್ಕೆ ಬ್ರೇಕ್ ಹಾಕುವ ಸಭೆನಾ? ಅಥವಾ ಇಬ್ಬರನ್ನ ಕರೆದು ಕೂರಿಸಿ ಸ್ಪಷ್ಟ ಸಂದೇಶ ನೀಡುವ ಸಭೆನಾ? ಇಲ್ಲ, ಮುಂಬರುವ ಪರಿಷತ್ ಚುನಾವಣೆ ಹಾಗೂ ರಾಜ್ಯಸಭಾ ಚುನಾವಣೆಗಳಿಗೆ ಪೂರ್ವಸಿದ್ಧತೆಗೆ ಸೂಚನೆ ನೀಡಲು ಹೈಕಮಾಂಡ್ ಬುಲಾವ್ ನೀಡಿದೆಯಾ ಅನ್ನೋದು ದೆಹಲಿಗೆ ತೆರಳಿದ ನಂತರವಷ್ಟೇ ತಿಳಿಯಲಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ 3 ವರ್ಷ ತುಂಬುತ್ತಿದ್ದಂತೆಯೇ ಸಿಎಂ ಬದಲಾವಣೆ ಚರ್ಚೆ ಮತ್ತೆ ಸ್ಫೋಟಗೊಂಡಿದೆ. ಕಳೆದ ಒಂದೂವರೆ ವರ್ಷದಿಂದ ಡಿಕೆಶಿ ಅದೇಷ್ಟೆ ಪ್ರಯತ್ನ ಪಟ್ಟರು ಕೂಡ ಸಿಎಂ ಕುರ್ಚಿ ಪಡೆಯಲು ಸಾಧ್ಯವಿಲ್ಲ, ಡಿಕೆಶಿ ಭಂಟರು ಇವತ್ತು ಸಿಎಂ ಆಗ್ತಾರೆ, ನಾಳೆ ಆಗ್ತಾರೆ ಅಂತ ಹೇಳುತ್ತಲೇ ಬಂದಿದ್ದಾರೆ. ಆದ್ರೆ ಆಸೆ ಈಡೇರುತ್ತಿಲ್ಲ, ಕಳೆದ 3 ವರ್ಷದಿಂದ ಕಾಂಗ್ರೆಸ್ನಲ್ಲಿ ಅದೇ ರಾಗ ಅದೇ ಹಾಡು ಆಗಿದೆ.

ಹೀಗಾಗಿ ರಾಜ್ಯದ ನಾಯಕರು ಹೈಕಮಾಂಡ್ ವಿರುದ್ಧವೇ ರೊಚ್ಚಿಗೆದ್ದಿದ್ದಾರೆ. ಆದಷ್ಟು ಬೇಗ ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ, ಇಲ್ಲದಿದ್ದರೆ ಸರಿ ಇರಲ್ಲ, ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಆಗಿದೆ ಎಂದು ಗುಡುಗುತ್ತಿದ್ದಾರೆ. ಆದ್ರೆ ಹೈಕಮಾಂಡ್ ಮಾತ್ರ ನೆಪ ಹೇಳುತ್ತಲೇ ಬಂದಿತ್ತು. ಇದೀಗ ಹೈಕಮಾಂಡ್ ಫೈನಲ್ ತೀರ್ಪು ಕೊಡುವ ಹಂತಕ್ಕೆ ಬಂದಿದೆ. ಹೀಗಾಗಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರನ್ನ ದೆಹಲಿಗೆ ಬರುವಂತೆ ಹೇಳಿದೆ.
