ರಾಮನಗರ: ಕಾಂಗ್ರೆಸ್ನವರು (Congress) ಮಧ್ಯರಾತ್ರಿ 3 ಸಾವಿರ ರೂ. ಕೂಪನ್ ಕಾರ್ಡ್ ಕೊಟ್ಟು ಆರ್ಥಿಕವಾಗಿ ಹಿಂದುಳಿದವರ ಮತ ಪಡೆದು ಅವರನ್ನ ದಾರಿ ತಪ್ಪಿಸಿದ್ದಾರೆ. ಆ ಮೂಲಕ ನನ್ನನ್ನ ಸೋಲಿಸಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಬೇಸರ ವ್ಯಕ್ತಪಡಿಸಿದ್ದಾರೆ.
ಚನ್ನಪಟ್ಟಣದಲ್ಲಿ (Channapatna Constituency) ನಡೆದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ನಿಖಿಲ್, ನಮ್ಮಪ್ಪ ನಿಮ್ಮನ್ನ ನಂಬಿ ಸ್ಪರ್ಧೆ ಮಾಡಿದರು ನೀವು ಕೈಹಿಡಿದ್ರಿ, ಪಕ್ಷ ಅಧಿಕಾರಕ್ಕೆ ತರಲು ಪಂಚರತ್ನ ಯಾತ್ರೆ ಮಾಡಿದರು. ಅವರ ಅನುಪಸ್ಥಿತಿಯಲ್ಲಿ ಇಲ್ಲಿನ ಜನ ಅವರನ್ನು ಗೆಲ್ಲಿಸಿದರು. ಯುವಕರು, ರೈತರು ಎಲ್ಲರೂ ಕುಮಾರಣ್ಣನ ಕೈಹಿಡಿದಿದ್ದಾರೆ. ಕುಮಾರಣ್ಣನ (HD Kumaraswamy) ಮೇಲೆ ಜನರ ಪ್ರೀತಿ ಕಂಡು ನಾನೇ ಬೆರಗಾದೆ. ಇಡೀ ರಾಮನಗರ ಜಿಲ್ಲೆಯಲ್ಲಿ ಅತಿಹೆಚ್ಚು ನಿಷ್ಠಾವಂತ ಕಾರ್ಯಕರ್ತರು ಇರುವುದು ಚನ್ನಪಟ್ಟಣದಲ್ಲೆ. ನಾನು ಸೋತಿರಬಹುದು, ಆದರೆ ರಾಮನಗರದ ಜನ ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ. ಅದು ವರ್ಣಿಸಲು ಸಾಧ್ಯವಿಲ್ಲ. ಎಂದಿಗೂ ನಾನು ಚಿರಋಣಿ. ನಿಮ್ಮ ಜೊತೆಯಲ್ಲಿ ನಾನು ನನ್ನ ಕುಟುಂಬ ಇರುತ್ತದೆ. ಸೋತ ಮಾತ್ರಕ್ಕೆ ಮನೆಯಲ್ಲಿ ಕೂರುವುದಿಲ್ಲ. ನಿಮ್ಮ ಜತೆ ಇರುತ್ತೇನೆ. ಸೋಲು-ಗೆಲುವು ನಮ್ಮ ಕುಟುಂಬಕ್ಕೆ ಹೊಸತಲ್ಲ ಎಂದಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಗೆ ಮಾನದಂಡ ಹಾಕ್ತೇವೆ: ಸತೀಶ್ ಜಾರಕಿಹೊಳಿ
2004 ರಿಂದ ಕುಮಾರಸ್ವಾಮಿ ಅವರು ರಾಮನಗರದಿಂದ ಸ್ಪರ್ಧೆ ಮಾಡಿದ್ದಾರೆ. ಅಂದಿನಿಂದ ಇಂದಿನವರೆಗೂ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಆದ್ರೆ ಈ ಬಾರಿ ಜನರು ಬೇರೆ ರೀತಿ ತೀರ್ಮಾನ ತೆಗೆದುಕೊಂಡಿದ್ದಾರೆ. ಮಂಡ್ಯದ ರೀತಿಯೇ ಇಲ್ಲಿಯೂ ಆಗಿರುವ ಬಗ್ಗೆ ನಿಮ್ಮ ಬಳಿ ಹಂಚಿಕೊಂಡಿದ್ದೆ. ಇಲ್ಲಿ ಕಾಂಗ್ರೆಸ್ ನವರು ಮಧ್ಯರಾತ್ರಿ 3 ಸಾವಿರ ರೂ. ಕೂಪನ್ ಕಾರ್ಡ್ ಕೊಟ್ಟು ಆರ್ಥಿಕವಾಗಿ ಹಿಂದುಳಿದವರ ಮತ ಪಡೆದು ಅವರನ್ನ ದಾರಿ ತಪ್ಪಿಸಿದ್ದಾರೆ, ನನ್ನನ್ನ ಸೋಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರಿಗೆ ಅರಿವಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇದೇ ತಿಂಗಳು ಉದ್ಘಾಟನೆಗೊಳ್ಳಬೇಕಿದ್ದ ಸಮುದಾಯ ಭವನದಲ್ಲಿ ಡಬಲ್ ಮರ್ಡರ್
ಇನ್ನೂ ನಿಖಿಲ್ ರಾಮನಗರ ತೊರೆಯುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನಾನು ಯಾವುದೇ ಕಾರಣಕ್ಕೂ ರಾಮನಗರ ಬಿಟ್ಟು ಹೋಗುವುದಿಲ್ಲ. ಜನರನ್ನ ಕೈ ಬಿಡುವ ಪ್ರಶ್ನೆ ಇಲ್ಲ. ಅಧಿಕಾರ ಇಲ್ಲದಿದ್ದರೂ ಜನಸೇವೆ ಮಾಡುತ್ತೇವೆ. ಮುಂದಿನ ರಾಜಕೀಯದ ಬಗ್ಗೆ ಸದ್ಯ ಯಾವುದೇ ಚಿಂತನೆ ನಡೆಸಲ್ಲ. ಚುನಾವಣಾ ರಾಜಕೀಯದ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ದೇವೇಗೌಡರು ಕಟ್ಟಿರುವ ಪಕ್ಷವನ್ನ ಬಲಿಷ್ಠಗೊಳಿಸುವ ಚಿಂತನೆ ನಡೆಸುತ್ತಿದ್ದೇನೆ. ಮುಂದಿನ ಲೋಕಸಭೆ ಆಗಲಿ, 2028ರ ವಿಧಾನಸಭಾ ಚುನಾವಣೆ ಬಗ್ಗೆ ನಾನು ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ನಾನು ಬೇರೆ ಜಿಲ್ಲೆಗೆ ಹೋಗುವ ಪ್ರಶ್ನೆ ಇಲ್ಲ. 2028ಕ್ಕೆ ರಾಮನಗರದಲ್ಲಿ ನನಗಿಂತ ಪ್ರಬಲ ಅಭ್ಯರ್ಥಿ ಬಂದ್ರೆ ಕಾರ್ಯಕರ್ತರಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಚರ್ಚಿಸುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.