ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿರುವ ಕಾಕ್ರೋಚ್ ಕರ್ನಾಟಕ ಜನತಾ ಪಾರ್ಟಿ(Cockroach Janta Party) ವತಿಯಿಂದ ಪ್ರತಿಭಟನಾ ಕರೆಗೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ (Bengaluru City Police) ಇಲಾಖೆ ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ಸಂದೇಶ ರವಾನಿಸಿದೆ.
ಬರುವ ಮೇ 24 ರಂದು ಬೆಂಗಳೂರಿನ ಟೌನ್ಹಾಲ್ ಮುಂಭಾಗದಲ್ಲಿ ‘ಶಾಂತಿಯುತ ಮಾನವ ಸರಪಳಿ’ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪೋಸ್ಟ್ಗಳನ್ನು ಹಂಚಿಕೊಳ್ಳಲಾಗುತ್ತಿದ್ದು, ಸಾರ್ವಜನಿಕರು ಭಾಗವಹಿಸುವಂತೆ ಕೋರಲಾಗಿದೆ. ಆದರೆ ಈ ಪ್ರತಿಭಟನೆಗೆ ಯಾವುದೇ ಕಾನೂನುಬದ್ಧ ಅನುಮತಿ ಇಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಹೆಸರಿನ ಪ್ರತಿಭಟನೆಗೆ ಪೊಲೀಸ್ ಇಲಾಖೆಯಿಂದ ಯಾವುದೇ ರೀತಿಯ ಅನುಮತಿ ನೀಡಿಲ್ಲ. ಅಷ್ಟೇ ಅಲ್ಲದೆ, ಇಂತಹ ಕಾರ್ಯಕ್ರಮ ಆಯೋಜಿಸಲು ಸಂಘಟಕರಿಂದ ಯಾವುದೇ ಅಧಿಕೃತ ಅರ್ಜಿಯೂ ಸಲ್ಲಿಕೆಯಾಗಿಲ್ಲ.ಸ್ಥಳೀಯ ಪ್ರಾಧಿಕಾರದಿಂದಲೂ ಟೌನ್ಹಾಲ್ ಬಳಕೆಗೆ ಯಾವುದೇ ಅನುಮತಿ ದೊರೆತಿಲ್ಲ. ಮಾನ್ಯ ಹೈಕೋರ್ಟ್ ಆದೇಶದ ಅನ್ವಯ, ಬೆಂಗಳೂರು ನಗರದಲ್ಲಿ ‘ಫ್ರೀಡಂ ಪಾರ್ಕ್’ ಹೊರತುಪಡಿಸಿ ಬೇರೆ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಪ್ರತಿಭಟನೆ ನಡೆಸಲು ಅವಕಾಶವಿರುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಕ್ರೋಚ್ ಜನತಾ ಪಾರ್ಟಿ ಎಕ್ಸ್ ಖಾತೆಗೆ ಭಾರತದಲ್ಲಿ ನಿರ್ಬಂಧ – ಯಾರಿದು ಅಭಿಜಿತ್ ದಿಪ್ಕೆ?
ಕಾಕ್ರೋಚ್ ಕರ್ನಾಟಕ ಜನತಾ ಪಾರ್ಟಿಯ ಮಾನವ ಸರಪಳಿಗೆ ಸಂಬಂಧಿಸಿದ ಪೋಸ್ಟ್ಗಳನ್ನು ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಮ್, ಎಕ್ಸ್ (ಟ್ವಿಟರ್) ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರೆ (ಫಾರ್ವರ್ಡ್ ಮಾಡಿದರೆ) ಅವರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ತಿಳಿದೋ ತಿಳಿಯದೆಯೋ ಮೇ 24 ರಂದು ಟೌನ್ಹಾಲ್ ಬಳಿ ಪ್ರತಿಭಟನೆಗಾಗಿ ಗುಂಪು ಸೇರಬಾರದು ಎಂದು ಸೂಚಿಸಿದ್ದಾರೆ.
ಯಾವುದೇ ನಕಲಿ ಹಾಗೂ ಕಾನೂನುಬಾಹಿರ ಸಂದೇಶಗಳನ್ನು ನಂಬಬೇಡಿ ಮತ್ತು ಬೇರೆಯವರಿಗೂ ಫಾರ್ವರ್ಡ್ ಮಾಡದೆ ಕಾನೂನು ಪ್ರಜ್ಞೆ ಮೆರೆಯಬೇಕಾಗಿ ಬೆಂಗಳೂರು ಪೊಲೀಸರು ಮನವಿ ಮಾಡಿದ್ದಾರೆ.

