ವಿಜಯಪುರ: ಪಿಎಫ್ಐ (PFI) ಬ್ಯಾನ್ ಮಾಡಿದಾಗ ಸ್ವಾಗತಿಸೋರು ರಾಮಸೇನೆಯವ್ರಿಗೆ ಚಿಕ್ಕಪ್ಪನ ಮಕ್ಕಳಾಗ್ಬೇಕಾ? ಎಂದು ಸಿಎಂ ಇಬ್ರಾಹಿಂ (CM Ibrahim) ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಎಸ್ಎಸ್ ಅನ್ನು ಬ್ಯಾನ್ ಮಾಡಿ ಅನ್ನುವ ಕಾಂಗ್ರೆಸ್ (Congress) ಅಧಿಕಾರದಲ್ಲಿದ್ದಾಗ ಏನು ಮಾಡಿತು? ಪಿಎಫ್ಐ ಬ್ಯಾನ್ ಎಂದಾಗ ಸ್ವಾಗತ ಅನ್ನೋರಿಗೆ ರಾಮಸೇನೆ ಅವರು ಚಿಕ್ಕಪ್ಪನ ಮಕ್ಕಳಾ?, ಗುಂಡಾಗಳು ಸತ್ತರೆ 5 ಲಕ್ಷ ರೂ. ಪರಿಹಾರ ಕೊಡುವವರು ಇವರು, ನಾವಿದ್ದಾಗ ಯಾವುದೇ ಧರ್ಮ ನೋಡದೆ ಹಿಂದೂ – ಮುಸ್ಲಿಂ ಎಲ್ಲರಿಗೂ ಸಮಾನ ಪರಿಹಾರ ಹಣ ನೀಡಿದ್ದೆವು. ನಾನು ಆರ್ಎಸ್ಎಸ್ ಆಗಲಿ ಪಿಎಫ್ಐ (PFI) ಆಗಲಿ ಯಾವುದನ್ನೂ ನಿಷೇಧ ಮಾಡಿ ಎಂದಿಲ್ಲ. ಏನೇ ಇದ್ದರೂ ಜನರ ಮುಂದಿಡಿ ಎಂದರು.
ಮೀಸಲಾತಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಎಸ್ಸಿ- ಎಸ್ಟಿ (SC ST) ಮೀಸಲಾತಿ ಹೆಚ್ಚಳ ಕೇವಲ ಗಿಮಿಕ್ ಆಗಿದೆ. ಆರ್ಎಸ್ಎಸ್ನವರಾದ (RSS) ಬಿ.ಎಸ್. ಯಡಿಯೂರಪ್ಪ ಇದ್ದಾಗಲೇ ಆಗಲಿಲ್ಲ. ಬೊಮ್ಮಾಯಿ ಅಡಬೆರಕಿ ಆರ್ಎಸ್ಎಸ್ ಇವರಿಂದ ಆಗುತ್ತದಾ? ಈ ಸರ್ಕಾರಕ್ಕೆ ದಿಕ್ಕಿಲ್ಲ, ದೆಸೆಯಿಲ್ಲ. ಇವರಿಗೆ ಬದ್ಧತೆಯಿದ್ದರೆ ಒಂದು ಕಮಿಟಿ ರಚನೆ ಮಾಡಲಿ, ಮೀಸಲಾತಿ ಕೇಳುತ್ತಿರುವವರ ಬಗ್ಗೆ ಸಮೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.
ಬರುವ 2023ಕ್ಕೆ ರಾಜ್ಯದಲ್ಲಿ ಜೆಡಿಎಸ್ (JDS) ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನ.1 ರಿಂದ ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ ಪಂಚರತ್ನ ಯಾತ್ರೆ ನಡೆಯಲಿದೆ. ಮುಂಬೈ ಕರ್ನಾಕ ಹಾಗೂ ಹೈದ್ರಾಬಾದ್ ಕರ್ನಾಟಕ ಭಾಗಗಳಲ್ಲಿ ಯಾತ್ರೆ ನಡೆಯಲಿದೆ. ಮಾಜಿ ಪ್ರಧಾನಿ ದೇವೇಗೌಡರ ಆಶಯಕ್ಕೆ ಅನುಗುಣವಾಗಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರುವುದು ಯಾತ್ರೆಯ ಉದ್ದೇಶವಾಗಿದೆ. ಬಿಜೆಪಿಗೆ ಮೋದಿ ಚಿಂತೆ, ಕಾಂಗ್ರೆಸ್ ಗೆ ರಾಹುಲ್ ಗಾಂಧಿ ಚಿಂತೆ, ಆದರೆ ಜೆಡಿಎಸ್ಗೆ ಮಾತ್ರ ರಾಜ್ಯದ ಚಿಂತೆ ಇದೆ ಎಂದು ತಿಳಿಸಿದರು.