ಆಲ್ ಇಂಡಿಯಾ ಸಿನಿ ಅಸೋಷಿಯೇಷನ್ ‘ಆದಿಪುರುಷ’ (Adipurush) ಸಿನಿಮಾದ ಮೇಲೆ ಸಾಕಷ್ಟು ಆರೋಪಗಳನ್ನು ಮಾಡಿದ್ದು, ಕೂಡಲೇ ಸಿನಿಮಾ ಪ್ರದರ್ಶನವನ್ನು ನಿಲ್ಲಿಸುವಂತೆ ಹಾಗೂ ಶಾಶ್ವತವಾಗಿ ಈ ಸಿನಿಮಾವನ್ನು ಬ್ಯಾನ್ (Ban) ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಪತ್ರವೊಂದನ್ನು ಬರೆದಿದೆ. ಅಲ್ಲದೇ, ನಿರ್ದೇಶಕ ಓಂ ರಾವುತ್ ಮತ್ತು ಲೇಖಕ ಮನೋಜ್ ಮೇಲೆ ಎಫ್.ಐ.ಆರ್ ದಾಖಲಿಸಬೇಕು ಎಂದು ಅದು ಒತ್ತಾಯ ಮಾಡಿದೆ.
ಹಿಂದೂಗಳ ಭಾವನೆಯನ್ನು ನೋವಿಸುವಂತಹ ಅನೇಕ ಸಂಗತಿಗಳು ಸಿನಿಮಾದಲ್ಲಿವೆ. ಭಗವಾನ್ ಶ್ರೀರಾಮ್ ಮತ್ತು ರಾವಣನನ್ನು ಕಾರ್ಟೂನ್ ರೀತಿಯಲ್ಲಿ ತೋರಿಸಲಾಗಿದೆ. ಹಿಂದೂಗಳ ಭಾವನೆಗೆ ಧಕ್ಕೆ ಬರುವಂತೆ ಚಿತ್ರ ತಯಾರಿಸಲಾಗಿದೆ. ಈ ಸಿನಿಮಾದಿಂದಾಗಿ ಅನೇಕರು ನೋವನ್ನುಂಡಿದ್ದಾರೆ. ಹಾಗಾಗಿ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಮಾತ್ರವಲ್ಲ, ಓಟಿಟಿ ಸೇರಿದಂತೆ ಯಾವ ವೇದಿಕೆಯಲ್ಲೂ ಪ್ರದರ್ಶನವಾಗಬಾರದು ಎಂದು ಸಿನಿ ಅಸೋಷಿಯೇಷನ್ (Cine Association) ಪ್ರಧಾನಿಗೆ ಮನವಿ ಮಾಡಿಕೊಂಡಿದೆ. ಇದನ್ನೂ ಓದಿ:ಲೈಂಗಿಕ ಕಿರುಕುಳ ಆರೋಪ: ಧಾರಾವಾಹಿ ನಿರ್ಮಾಪಕನ ಮೇಲೆ ಎಫ್.ಐ.ಆರ್ ದಾಖಲು
ಆದಿಪುರುಷ ಸಿನಿಮಾವನ್ನು ಗಂಭೀರವಾಗಿ ತೆಗೆದುಕೊಂಡಿರುವ ಸಿನಿ ಅಸೋಷಿಯೇಷನ್ ಸಿನಿಮಾವನ್ನು ಬ್ಯಾನ್ ಮಾಡಲೇಬೇಕು ಎಂದು ಪ್ರಧಾನಿಯನ್ನು ಒತ್ತಾಯಿಸಿದ್ದಾರೆ. ಇತಿಹಾಸವನ್ನು ಈ ಸಿನಿಮಾದಲ್ಲಿ ತಿರುಚಲಾಗಿದೆ. ಅಲ್ಲದೇ ಡೈಲಾಗ್ ನಲ್ಲೂ ಹಿಂದೂ ಧರ್ಮಕ್ಕೆ ಅವಹೇಳನ ಮಾಡುವಂತಹ ಪದಗಳನ್ನು ಬಳಸಲಾಗಿದೆ. ಹೀಗಾಗಿ ಕೂಡಲೇ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಪತ್ರದಲ್ಲಿ ಬರೆಯಲಾಗಿದೆ.
ನಟ ಪ್ರಭಾಸ್ (Prabhas) ಅವರು ಇಂತಹ ಕೆಟ್ಟ ಸಿನಿಮಾದ ಭಾಗವಾಗಬಾರದಿತ್ತು. ಕೃತಿ ಸನೂನ್ ಸೇರಿದಂತೆ ನುರಿತ ಕಲಾವಿದರೇ ಈ ಸಿನಿಮಾದಲ್ಲಿದ್ದಾರೆ. ಶೂಟಿಂಗ್ ಮಾಡುವಾಗ ಇವರಿಗೆ ಅರ್ಥವಾಗಲಿಲ್ಲವೆ? ಎಂದು ಹಲವರು ಕೇಳಿದ್ದಾರೆ.