ಚಿತ್ರದುರ್ಗ: ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ವ್ಯಕ್ತಿಯ ಮೃತದೇಹವನ್ನು ಸ್ವತಃ ತೆಗೆದು, ಟ್ರಾಫಿಕ್ ಕ್ಲಿಯರ್ ಮಾಡುವ ಮೂಲಕ ಜಿಲ್ಲೆಯ ಎಸ್ಪಿ ಅರುಣ್ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.
ಹಿರಿಯೂರು ತಾಲೂಕಿನ ಸೊಂಡೆಕೆರೆ ಗ್ರಾಮದ ಶ್ರೀನಿವಾಸ್ (55) ಮೃತ ದುರ್ದೈವಿ. ರಾಷ್ಟ್ರೀಯ ಹೆದ್ದಾರಿ 13ರ ಪಿಳ್ಳೆಕೆರೆನಹಳ್ಳಿ ಬಳಿ ಲಾರಿಯೊಂದು ಬೈಕಿಗೆ ಡಿಕ್ಕಿ ಹೊಡೆದು ಬಳಿಕ ಬೈಕ್ ಸವಾರನ ತಲೆಯ ಮೇಲೆ ಹರಿದ ಪರಿಣಾಮ ಶ್ರೀನಿವಾಸ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅಪಘಾತವಾದ ಬಳಿಕ ಎರಡು ಗಂಟೆ ಕಳೆದರೂ ಸಹ ಯಾವುದೇ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿರಲಿಲ್ಲ.
ಈ ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಚಿತ್ರದುರ್ಗ ಎಸ್ಪಿ ಅರುಣ್ ಸ್ವತಃ ರಸ್ತೆ ಮೇಲೆ ಬಿದ್ದಿದ್ದ ಮೃತ ದೇಹವನ್ನು ತೆರವು ಮಾಡಿದ್ದಾರೆ. ಅಲ್ಲದೇ ಎರಡು ಕಿಲೋ ಮೀಟರ್ವರೆಗೆ ಉಂಟಾಗಿದ್ದ ಟ್ರಾಫಿಕ್ ಜಾಮ್ ನ್ನು ಕ್ಲಿಯರ್ ಮಾಡುವ ಮೂಲಕ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.
ಅಪಘಾತವಾಗುತ್ತಿದ್ದಂತೆ ಪರಾರಿಯಾಗಲು ಯತ್ನಿಸಿದ ಲಾರಿ ಚಾಲಕನನ್ನು ಸ್ಥಳೀಯರು ಬೆನ್ನತ್ತಿದ್ದರು. ಆದರೆ ಚಾಲಕ ಲಾರಿಯನ್ನು ರಸ್ತೆ ಮಧ್ಯೆಯೇ ಬಿಟ್ಟು ಪರಾರಿಯಾಗಿ ಹೋಗಿದ್ದಾನೆ. ಸದ್ಯ ಲಾರಿಯನ್ನು ಸ್ಥಳೀಯರು ಟ್ರಾಫಿಕ್ ಪೊಲೀಸರ ವಶಕ್ಕೆ ನೀಡಿದ್ದಾರೆ. ಘಟನೆ ಸಂಬಂಧ ಚಿತ್ರದುರ್ಗ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv