ಚೆನ್ನೈ: ವೆಲ್ಲೂರಿನಲ್ಲಿ ಮಹಿಳಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.
ಗುರುವಾರ ಬೆಳಗ್ಗೆ ಅತ್ಯಾಚಾರ ನಡೆದಿದೆ. ಸಂತ್ರಸ್ತೆ ಆರಂಭದಲ್ಲಿ ಪೊಲೀಸರನ್ನು ಸಂಪರ್ಕಿಸಲಿಲ್ಲ. ಆದರೆ, ಕುಡಿದ ಅಮಲಿನಲ್ಲಿ ಜಗಳವಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದಾಗ ಅವರು ಅತ್ಯಾಚಾರ ನಡೆಸಿರುವುದು ಪೊಲೀಸರಿಗೆ ಗೊತ್ತಾಗಿದೆ. ದರೋಡೆ ಮಾಡಲು ಹೋಗಿದ್ದ ಆ ಪುರುಷರು ಅದಕ್ಕೂ ಮೊದಲು ಯುವತಿಯ ಮೇಲೆ ಅತ್ಯಾಚಾರವೆಸಗಿದ್ದರು ಎಂದು ಅವರು ಪೊಲೀಸರ ಬಳಿ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಸತತ 3ನೇ ದಿನ ಪೆಟ್ರೋಲ್, ಡೀಸೆಲ್ ದರ ಏರಿಕೆ
ವೆಲ್ಲೂರಿನ ಸತುವಾಚಾರಿಯಲ್ಲಿ ಎಟಿಎಂ ಹೊರಗೆ ಇಬ್ಬರು ಆರೋಪಿಗಳ ನಡುವೆ ಕುಡಿದ ಅಮಲಿನಲ್ಲಿ ಜಗಳವಾಗುತ್ತಿತ್ತು. ಆಗ ಪೊಲೀಸರು ಮಧ್ಯ ಪ್ರವೇಶಿಸಿದರು. ಅವರಿಬ್ಬರನ್ನು ಸತುವಾಚಾರಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದು, ದರೋಡೆ ಮಾಡಿದ್ದಾರೆ ಎನ್ನಲಾದ 40,000 ರೂ.ಗಳನ್ನು ಹಂಚಿಕೆ ಮಾಡುವ ಬಗ್ಗೆ ಇಬ್ಬರೂ ಜಗಳ ಮಾಡಿದ್ದಾರೆ.
ಈ ಕುರಿತು ತನಿಖೆ ನಡೆಸಿದಾಗ ಅವರು ಅತ್ಯಾಚಾರ ನಡೆಸಿದ್ದಾಗಿ ಒಪ್ಪಿಕೊಂಡಿದ್ದನ್ನು ಕೇಳಿ ಪೊಲೀಸರು ಆಘಾತಗೊಂಡಿದ್ದಾರೆ. ಈ ಕುರಿತು ಹೆಚ್ಚಿನ ವಿಚಾರಣೆ ನಡೆಸಿದಾಗ ಅವರಿಬ್ಬರೂ ಯುವತಿಯ ಮೇಲೆ ಅತ್ಯಾಚಾರವೆಸಗಿರುವುದಾಗಿ, ನಂತರ ಸಂತ್ರಸ್ತೆ ಹಾಗೂ ಅವರ ಪ್ರೇಮಿಯ ಬಳಿಯಿದ್ದ ಹಣವನ್ನು ದರೋಡೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯು ತನ್ನ ಪ್ರಿಯಕರನೊಂದಿಗೆ ಸಿನಿಮಾ ವೀಕ್ಷಿಸಿ, ನಂತರ ಕೆಲಸ ಮಾಡುವ ಖಾಸಗಿ ಆಸ್ಪತ್ರೆಗೆ ತೆರಳಲು ಆಟೋ ನಿಲ್ಲಿಸಿದ್ದಾರೆ. ಅದರಲ್ಲಿ ಆಗಲೇ ಒಬ್ಬಾತ ಪ್ರಯಾಣಿಸುತ್ತಿದ್ದ. ಈ ವೇಳೆ ಆಟೋ ಚಾಲಕನು ಯುವತಿಗೆ ಇದು ಶೇರ್ ಆಟೋ ಎಂದು ಹೇಳಿಕೊಂಡು ಅವರನ್ನು ಹತ್ತಿಸಿಕೊಂಡಿದ್ದಾನೆ. ಆದರೆ ಆ ಆಟೋ ಬೇರೆ ಮಾರ್ಗದಲ್ಲಿ ಚಲಿಸಿತು. ಆಗ ದಾರಿಯಲ್ಲಿ ಬ್ಯಾರಿಕೇಡ್ ಹಾಕಿದ್ದರಿಂದ ಬೇರೆ ಮಾರ್ಗದಲ್ಲಿ ಬಂದಿದ್ದಾಗಿ ಚಾಲಕ ಹೇಳಿದ್ದ.
ಆದರೆ ಆಟೋ ಮತ್ತೆ ಬೇರೆಡೆ ತಿರುಗಿದಾಗ ಗಾಬರಿಯಾದ ಅವರಿಬ್ಬರೂ ಜೋರಾಗಿ ಕಿರುಚಾಡಿದ್ದಾರೆ. ಅಷ್ಟರಲ್ಲಿ ಅವರ ಮೇಲೆ ದಾಳಿ ಮಾಡಿ ಏಕಾಂತ ಸ್ಥಳಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಐವರು ಪುರುಷರು ಆ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ನಂತರ ಆಕೆಯ ಪ್ರಿಯಕರನನ್ನು ಹತ್ತಿರದ ಎಟಿಎಂಗೆ ಕರೆದೊಯ್ದು 40,000 ರೂ.ಗಳನ್ನು ಡ್ರಾ ಮಾಡುವಂತೆ ಹೆದರಿಸಿದ್ದಾರೆ. ನಂತರ ಯುವತಿಯ ಮೊಬೈಲ್, ಚಿನ್ನಾಭರಣವನ್ನೂ ಕಿತ್ತುಕೊಂಡು ಅಲ್ಲಿಂದ ಅವರು ಓಡಿಹೋಗಿದ್ದಾರೆ.
ವೆಲ್ಲೂರಿನ ಪೊಲೀಸ್ ಅಧೀಕ್ಷಕರಾದ ಎಸ್ ರಾಜೇಶ್ ಕಣ್ಣನ್ ಅವರ ಆದೇಶದ ಮೇರೆಗೆ ದೂರಿನ ಮೇರೆಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ. ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಉಪ ಪೊಲೀಸ್ ವರಿಷ್ಠಾಧಿಕಾರಿ ಆರ್ ರವಿಚಂದ್ರನ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ – ತಾಯಿ, ಮಗ ಆತ್ಮಹತ್ಯೆ
ಆರೋಪಿಗಳಲ್ಲಿ ಮೂವರ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ತಮಿಳುನಾಡು ಮಹಿಳಾ ಕಿರುಕುಳ ನಿಷೇಧ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಾಲಾಪರಾಧಿಗಳ ವಿರುದ್ಧ ಬಾಲಾಪರಾಧಿ ಕಾಯ್ದೆಯ ಸೆಕ್ಷನ್ 21 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.