ತುಮಕೂರು: ನಾಲ್ಕು ಜನರನ್ನು ಬಲಿ ತೆಗೆದುಕೊಂಡ ನರಭಕ್ಷಕ ಚಿರತೆಗೆ ಶೂಟೌಟ್ ಮಾಡಲು ಕಾರ್ಯಾಚರಣೆ ಆರಂಭವಾಗಿದೆ.
ಕಳೆದ 6 ತಿಂಗಳಲ್ಲಿ ಇಬ್ಬರು ವೃದ್ಧರು ಹಾಗೂ ಇಬ್ಬರು ಮಕ್ಕಳನ್ನು ಬಲಿ ತೆಗೆದುಕೊಂಡಿದ್ದ ಚೀತಾಗೆ ಈಗ ಖೆಡ್ಡಾ ತೋಡಲಾಗಿದೆ. ಜನವರಿ 12ರಂದು ಬಾಲಕ ಸಮರ್ಥನ ಬಲಿ ತೆಗೆದುಕೊಂಡ ಚೀತಾ ಶನಿವಾರ ಮೂರು ವರ್ಷದ ಬಾಲಕಿ ಚಂದನಾಳ ರಕ್ತ ಹೀರಿದೆ. ಹಾಗಾಗಿ ಆಪರೇಷನ್ ಸಮರ್ಥ ಎನ್ನುವ ಹೆಸರಿನಲ್ಲಿ ಕಾರ್ಯಾಚರಣೆ ಚುರುಕುಗೊಂಡಿದೆ.
ತುಮಕೂರು ತಾಲೂಕಿನ ಕಣಕುಪ್ಪೆ, ಬೈಚೇನಹಳ್ಳ ಹಾಗೂ ಗುಬ್ಬಿ ತಾಲೂಕಿನ ಮಣಿಕುಪ್ಪೆ, ಸಿಎಸ್ ಪುರ ಸೇರಿದಂತೆ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ. 21 ಬೋನ್, 40 ಕ್ಯಾಮರ ಅಳವಡಿಸಿದರೂ ಪತ್ತೆಯಾಗದ ಚಿರತೆ ಜಾಡು ಹಿಡಿದು ಹೊರಟಿದ್ದಾರೆ.
ಒಟ್ಟು 12 ಕಿ.ಮೀ ವ್ಯಾಪ್ತಿಯಲ್ಲಿ ಬೋನಿಟ್ಟು ಕಾರ್ಯಾಚರಣೆ ಮಾಡಲಾಗುತ್ತಿದೆ. ಚಾಮರಾಜನಗರದ ಸೋಲಿಗರ ತಂಡ ಹಾಗೂ ಅರಣ್ಯ ಇಲಾಖೆಯ 25 ಸಿಬ್ಬಂದಿಗಳಿಂದ ಶೋಧ ಕಾರ್ಯ ಆರಂಭವಾಗಿದೆ.