– ತಟ್ಟಲ್ಲ ಗ್ರಹಣದ ಎಫೆಕ್ಟ್
ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದ ಹನೂರು ತಾಲೂಕಿನ ಮಲೆ ಮಹದೇಶ್ವರನಿಗೆ ಈ ಸೂರ್ಯ ಗ್ರಹಣದ ಎಪೆಕ್ಟ್ ತಟ್ಟಲ್ಲ. ಎಂದಿನಂತೆ ಗ್ರಹಣದ ವೇಳೆಯೂ ಕೂಡ ದೇವಾಲಯ ಬಾಗಿಲು ತೆರೆಯಲಿದ್ದು ಭಕ್ತರು ದೇವರ ದರ್ಶನ ಮಾಡಬಹುದಾಗಿದೆ.
ಬೆಳಗ್ಗೆ ದೇವಾಲಯ ಬಾಗಿಲು ತೆರೆಯಲಿದ್ದು, ವಿಶೇಷ ಪೂಜೆ ಜರುಗಲಿದೆ. ದೇವಾಲಯದ ಪೂಜೆಯ ನಂತರ ಪ್ರತಿನಿತ್ಯದಂತೆ ಗ್ರಹಣದ ವೇಳೆಯೂ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆಯಬಹುದು.
ಗ್ರಹಣದ ವೇಳೆ ರಾಜ್ಯದ ಬಹುತೇಕ ದೇವಾಲಯಗಳು ಬಂದ್ ಆಗಲಿದ್ದು, ಆದರೆ ಮಾದಪ್ಪನ ಸನ್ನಿದಾನದಲ್ಲಿ ದರ್ಶನದ ಜೊತೆಗೆ ದಾಸೋಹಕ್ಕೂ ಕೂಡ ಯಾವುದೇ ಬ್ರೇಕ್ ಬಿದ್ದಿಲ್ಲ. ಎಂದಿನಂತೆ ಭಕ್ತರೂ ಬಂದು ದೇವರ ದರ್ಶನ ಪಡೆಯಬಹುದು ಎಂದು ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯ ವಿಭವ ಸ್ವಾಮಿ ಮಾಹಿತಿ ನೀಡಿದ್ದಾರೆ. ಮಲೆ ಮಹವೇಶ್ವರ ದೇವಾಲಯಕ್ಕೆ ಗ್ರಹಣ ಪ್ರಭಾವ ಇರುವುದಿಲ್ಲ. ಇದುವರೆಗೂ ಯಾವುದೇ ಗ್ರಹಣದ ಸಂದರ್ಭದಲ್ಲೂ ದೇವಾಲಯಕ್ಕೆ ಬಾಗಿಲು ಹಾಕಿಲ್ಲ. ಮುಂಜಾನೆಯೇ ದೇವರಿಗೆ ಪೂಜೆ ನಡೆಯುವುದರಿಂದ ಭಕ್ತರು ದೇವರ ದರ್ಶನ ಮಾಡಬಹುದಾಗಿದೆ. ಆದರೆ ಆ ಬಳಿಕ ಯಾವುದೇ ಪೂಜಾ ಕಾರ್ಯ ಜರುಗುವುದಿಲ್ಲ ಎಂಬ ಮಾಹಿತಿ ಲಭಿಸಿದೆ.