ಬೆಂಗಳೂರು: ಕರಾವಳಿಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ಜೊತೆಗೆ ಇಂದು ಬೆಳ್ಳಂಬೆಳಗ್ಗೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಬೆಂಕಿ ಬಾಂಬ್ ಬಿಜೆಪಿಯ ವಿರುದ್ಧ ರೋಷಾಗ್ನಿಗೆ ತುಪ್ಪ ಸುರಿದಂತೆ ಆಗಿದೆ. ಅಕ್ಷರಶಃ ಥಂಡಾ ಹೊಡೆದಂತೆ ಆಗಿದೆ ಬಿಜೆಪಿ ಪರಿಸ್ಥಿತಿ. ಚಕ್ರವರ್ತಿ ಸೂಲಿಬೆಲೆ ಬಿಜೆಪಿ ಮಾಡಿರುವ ಚಾರ್ಜ್ಶೀಟ್ ಮಾತಿನ ಚಾಟಿ ಹೇಗಿತ್ತು ನೋಡಿ.
ಬಿಜೆಪಿ ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಮೂಲಕ ಕಿಡಿಕಾರಿರುವ ಸೂಲಿಬೆಲೆ, 23 ಹಿಂದೂ ಕಾರ್ಯಕರ್ತರ ಸಮಾಧಿಯಲ್ಲಿ ಅಧಿಕಾರದ ಮಹಲು ಕಟ್ಟಿದ್ದೀರಿ. ಭ್ರಷ್ಟಾಚಾರ ರಹಿತ ಸರ್ಕಾರವನ್ನು ಕೊಟ್ಟಿದ್ದಿದ್ದರೆ ಕಾರ್ಯಕರ್ತರು ಹೆಮ್ಮೆ ಪಡ್ತಾ ಇದ್ರು. ಅದನ್ನು ಮಾಡಿಲ್ಲ. ಹರ್ಷ ಕೊಲೆಗಡುಕರಿಗೆ ಗಲ್ಲು ಶಿಕ್ಷೆ ಅಂದ್ರಿ. ಜೈಲಿನಲ್ಲಿ ಹಂತಕರಿಗೆ ಮೊಬೈಲ್ ಕೊಟ್ರಿ. 40 ಪರ್ಸೆಂಟ್ ಕಮಿಷನ್ ಸರ್ಕಾರ ಅಂತಾ ಲೇವಡಿ ಮಾಡಿದಾಗಲೂ ಸಮರ್ಥವಾಗಿ ಇದನ್ನು ತಳ್ಳಿ ಹಾಕಲು ನಿಮಗೆ ಒಬ್ಬರಿಗೂ ಧೈರ್ಯ ಇಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ದ.ಕನ್ನಡದಲ್ಲಿ ಪೊಲೀಸ್ ಬಂದೋಬಸ್ತ್ ಕಡಿಮೆ ಇದ್ದು, ಹೆಚ್ಚಿಸಬೇಕು: ಡಿಜಿಪಿ ಪ್ರವೀಣ್ ಸೂದ್
ಈಶ್ವರಪ್ಪ, ಸಿದ್ಧೇಶ್ವರ್ರವರೇ ನಿಮ್ಮ ಸ್ಥಾನವನ್ನು ಬೇರೆ ಅನೇಕ ನಾಯಕರು ತುಂಬಬಹುದು. ಆದರೆ ಕಾರ್ಯಕರ್ತರ ಬಗ್ಗೆ ಲೇವಡಿ ಮಾಡುವ ನೀವು, ಆ ಕಾರ್ಯಕರ್ತನ ಸ್ಥಾನವನ್ನು ಬೇರೆ ಯಾರಿಂದಲೂ ತುಂಬಲು ಅಸಾಧ್ಯ ಅಂತಾ ಅರ್ಥಮಾಡಿಕೊಳ್ಳಬೇಕು. ಕುಟುಂಬ ರಾಜಕೀಯದ ಮುಖವಾಣಿ ನಿಮ್ಮಿಂದ ಯಾವ ಬದಲಾವಣೆ ನಿರೀಕ್ಷೆ ಮಾಡಲು ಸಾಧ್ಯ? ಬಿಎಸ್ವೈ ಮತ್ತು ಮಕ್ಕಳು ಜಾರಕಿಹೊಳಿ ಮತ್ತು ಕುಟುಂಬ, ಎಂಎಲ್ಎ ರವಿಸುಬ್ರಮಣ್ಯ ಮತ್ತು ಕುಟುಂಬ, ಶೆಟ್ಟರ್ ಮತ್ತು ಕುಟುಂಬ ನಿಮ್ಮಿಂದ ಯಾವ ಬದಲಾವಣೆ ನಿರೀಕ್ಷೆ ಮಾಡಬಹುದು ಎಂದು ಖಾರವಾಗಿ ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.
ಹಲಾಲ್ ಕಟ್, ಆಜಾನ್ ಹೋರಾಟ ಮಾಡಿದಾಗ ನೀವೇನ್ ಮಾಡಿದ್ರಿ? ಮೈಸೂರಿನಲ್ಲಿ ದೇವಸ್ಥಾನ ಒಡೆದಿದ್ದೆ ನಿಮ್ಮ ಸಾಧನೆಯೇ? ಕೊರೊನಾ ಸಂದರ್ಭದಲ್ಲಿ ಬೆಡ್, ಪಿಪಿಇ ಕಿಟ್ನಲ್ಲಿ ಜನರನ್ನು ಲೂಟಿ ಮಾಡಿದ್ರಿ. ಕಾರ್ಯಕರ್ತರಿಗೆ ಇದೆಲ್ಲವೂ ಗೊತ್ತಿಲ್ಲ ಅಂದುಕೊಂಡ್ರಾ? ಬಿಜೆಪಿ ಅಧಿಕಾರದ ಆಸೆಗೆ ಕೆಲ ಕಾಂಗ್ರೆಸ್ಸಿಗರನ್ನು ಪಕ್ಷದೊಳಗೆ ಸೇರ್ಪಡೆ ಮಾಡಿಕೊಂಡಿದೆ. ಭ್ರಷ್ಟಾಚಾರ, ಅಪ್ರಾಮಾಣಿಕತೆ ಸಿದ್ಧಾಂತಗಳಿಲ್ಲ. ಮೋದಿ ವಿರುದ್ಧದ ಸಿದ್ಧಾಂತಗಳಿರುವ ಹಾಗೂ ದರ್ಪ ತೋರುವ ಕಾರ್ಯಕರ್ತರನ್ನು ಹೊಂದಿರುವ ಕೆಲವರಿಗೆ ಸಚಿವರ ಹುದ್ದೆ ಕೊಟ್ಟಿದೆ. ಹೀಗಿರುವಾಗ ಕಾರ್ಯಕರ್ತರ ಪರಿಸ್ಥಿತಿ ಏನಾಗಿರಬೇಡ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರವೀಣ್ ಮನೆಗೆ ಮಾಜಿ ಸಿಎಂ ಹೆಚ್ಡಿಕೆ ಭೇಟಿ – ನೆಟ್ಟಾರು ಕುಟುಂಬಕ್ಕೆ 5 ಲಕ್ಷ ಪರಿಹಾರ
ಕಾರ್ಯಕರ್ತರನ್ನು ಪುಟ್ಬಾಲ್ ಒದೆಯುವಂತೆ ಒದೆಯುತ್ತಿದ್ದೀರಾ? ಕಾರ್ಯಕರ್ತರಿಗೆ ಎತ್ತ ಹೋಗಬೇಕು ಎನ್ನುವಂತಾಗಿದೆ. ಭ್ರಷ್ಟಾಚಾರದಲ್ಲಿ ಹಣ, ಅಧಿಕಾರದ ಅಮಲಿನಲ್ಲಿ ಮುಳುಗಿ ಹೋಗಿದ್ದೀರಾ. ರೈತರು, ಕಾರ್ಮಿಕರು, ಶಿಕ್ಷಕರು.. ಯಾರ ಸಮಸ್ಯೆಗೂ ನೀವು ಸ್ಪಂದಿಸಲ್ಲ. ಆದರೆ ಸಿನಿಮಾ ಪ್ರೀಮಿಯರ್ ಶೋಗೆ ಸಿಎಂ ಹೋಗುತ್ತೀರೆ. ಫೈಲ್ಗಳಿಗೆ ಸಹಿ ಹಾಕೋಕೆ ಮಾತ್ರ ತಾವು ಬ್ಯುಸಿ ಎಂದು ಸಿಎಂ ವಿರುದ್ಧ ಕೂಡ ವಾಗ್ದಾಳಿ ನಡೆಸಿದ್ದಾರೆ.