ದಾವಣಗೆರೆ: ರಾಜ್ಯ ಕಾಂಗ್ರೆಸ್ (Congress) ಪಾಲಿಗೆ ಎರಡು ಕ್ಷೇತ್ರದ ಉಪಚುನಾವಣೆ (By-Elections) ತಲೆನೋವಾದಂತಿದೆ. ದಾವಣಗೆರೆಯಲ್ಲಿ (Davanagere) ಮೈನಾರಿಟಿ ವರ್ಸಸ್ ಮಲ್ಲಿಕಾರ್ಜುನ್ ಫೈಟ್ ಪರಿಹಾರವೇ ಸವಾಲು ಎನ್ನುವಂತಾಗಿದೆ. ಬಾಗಲಕೋಟೆಯಲ್ಲಿ (Bagalkote) ಕುಟುಂಬದ ಸಮಸ್ಯೆ ಬಗೆಹರಿದರೂ ಸ್ಥಳೀಯ ನಾಯಕರ ಸಮಾಧಾನದ ಸವಾಲು ಕೂಡ ಎದುರಾಗಿದ್ದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ರಾಜ್ಯದಲ್ಲೇ ಇದ್ದು ಗೊಂದಲ ಪರಿಹಾರಕ್ಕೆ ಮುಂದಾಗಿದ್ದಾರೆ.
ಈ ಎಲ್ಲಾ ಬೆಳವಣಿಗೆ ನಡುವೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಶುಕ್ರವಾರ (ಮಾ.3) ಮೂರು ಸಭೆಗಳನ್ನು ಮಾಡಿದ್ದಾರೆ. ಸಿಎಂ, ಡಿಸಿಎಂ ಜೊತೆ ಪ್ರತ್ಯೇಕವಾಗಿ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಎರಡೂ ಕ್ಷೇತ್ರದ ಚುನಾವಣಾ ಉಸ್ತುವಾರಿಗಳ ಜೊತೆ ಸಭೆ ಸಹ ನಡೆಸಲಾಗಿದೆ. ಗೊಂದಲ ಪರಿಹಾರಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಪ್ರಯತ್ನ ಜೋರಾಗಿದ್ದು ಇಂದು ಅಭ್ಯರ್ಥಿ ಆಯ್ಕೆ ಅಂತಿಮವಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ದಾವಣಗೆರೆಗೆ ನಾಲ್ವರ ಹೆಸರನ್ನು ಶಿಫಾರಸು ಮಾಡಿದ ಮುಸ್ಲಿಮ್ ನಾಯಕರು
ಎರಡು ಕ್ಷೇತ್ರದಲ್ಲಿ ಗೊಂದಲ ಇದ್ದರೂ ಬಾಗಲಕೋಟೆ ಗೊಂದಲ ಪರಿಹಾರಕ್ಕೆ ಸಿಎಂ ಸಂಧಾನ ಸೂತ್ರ ಸಿದ್ಧವಿದೆ. ಮೇಟಿ ಕುಟುಂಬದ ಗಂಡು ಮಕ್ಕಳಲ್ಲಿ ಒಬ್ಬರಿಗೆ ಟಿಕೆಟ್ ಖಚಿತವಾಗಿದೆ. ಆದರೆ ದಾವಣಗೆರೆಯಲ್ಲಿ ಮೈನಾರಿಟಿ ವರ್ಸಸ್ ಮಲ್ಲಿಕಾರ್ಜುನ್ ಫೈಟ್ ಜೋರಾಗಿದೆ. ಶುಕ್ರವಾರ ಸಿಎಂ ಡಿಸಿಎಂ ಜೊತೆಗಿನ ಸುರ್ಜೇವಾಲ ಸಭೆಗೂ ಮೊದಲೇ ಅವರನ್ನು ಭೇಟಿ ಮಾಡಿದ ಸಚಿವ ಮಲ್ಲಿಕಾರ್ಜುನ್ ತಮ್ಮ ಪುತ್ರನಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಆನಂತರ ಮೈನಾರಿಟಿ ನಾಯಕರ ಸಭೆ ನಡೆಸಿದ ಸುರ್ಜೇವಾಲ, ನಾಲ್ವರು ಮೈನಾರಿಟಿ ನಾಯಕರ ಪಟ್ಟಿ ಪಡೆದಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಎರಡು ದಿನವಷ್ಟೆ ಬಾಕಿ ಇದ್ದು ಬಹುತೇಕ ಇಂದೇ ಟಿಕೆಟ್ ಘೋಷಣೆ ಆಗಬೇಕಿದೆ. ಈ ಮಧ್ಯೆ ಮಲ್ಲಿಕಾರ್ಜುನ್ ಪುತ್ರ ಸಮರ್ಥ್ ಹಾಗೂ ಮುಸ್ಲಿಂ ಅಭ್ಯರ್ಥಿ ಒಬ್ಬರು ಬಿ ಫಾರಂಗೂ ಮೊದಲೇ ನಾಮಪತ್ರ ಸಲ್ಲಿಸಿ ಸೆಡ್ಡು ಹೊಡೆದಿದ್ದಾರೆ. ಇದನ್ನೂ ಓದಿ: ದಾವಣಗೆರೆ ದಕ್ಷಿಣ ಉಪಚುನಾವಣೆ – ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸ ಕರಿಯಪ್ಪ

