ವಾಷಿಂಗ್ಟನ್/ನವದೆಹಲಿ: ಭಾರತಕ್ಕಿಂತಲೂ ಹೆಚ್ಚು ಜನರು ಭಯೋತ್ಪಾದನೆಗೆ (Terrorism) ಬಲಿಯಾಗಿದ್ದಾರೆ. ನಮಗೆ ಭಯೋತ್ಪಾದನೆಯನ್ನು ಬೆಂಬಲಿಸಲು ಯಾವುದೇ ಕಾರಣವಿಲ್ಲ. ಒಸಾಮಾ ಬಿನ್ ಲಾಡೆನ್ ಸತ್ತಿದ್ದರೂ ಗುಜರಾತ್ನ ಕಟುಕ ಇನ್ನೂ ಜೀವಂತವಾಗಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ಪಾಕಿಸ್ತಾನದ ವಿದೇಶಾಂಗ ಸಚಿವ (Pakistan Foreign Minister) ಬಿಲಾವಲ್ ಭುಟ್ಟೋ (Bilawal Bhutto) ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಾಲಿಗೆ ಹರಿಬಿಟ್ಟಿದ್ದಾರೆ.
ವಿಶ್ವಸಂಸ್ಥೆಯಲ್ಲಿ (United Nations) ಗುರುವಾರ ವಿದೇಶಾಂಗ ಸಚಿವ ಜೈಶಂಕರ್ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದ್ದರು. ಒಸಾಮಾ ಬಿನ್ ಲಾಡೆನ್ಗೆ ಆಶ್ರಯ ಕೊಟ್ಟವರಿಂದ ನಾವು ನೀತಿಪಾಠ ಹೇಳಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಪಾಕಿಸ್ತಾನವನ್ನು ಚುಚ್ಚಿದ್ದರು. ಇದರಿಂದ ವಿಶ್ವಸಂಸ್ಥೆ ವೇದಿಕೆಯಲ್ಲಿ ತೀವ್ರ ಮುಜುಗರ ಅನುಭವಿಸಿದ್ದ ಪಾಕ್ ವಿದೇಶಾಂಗ ಮಂತ್ರಿ ಬಿಲಾವಲ್ ಭುಟ್ಟೋ, ನ್ಯೂಯಾಕ್ನಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.
ಭಾರತದ ಪ್ರಧಾನಿ ಮೋದಿ ಆರ್ಎಸ್ಎಸ್ನವರು.ವಿದೇಶಾಂಗ ಮಂತ್ರಿಯೂ ಆರ್ಎಸ್ಎಸ್ನವರು. ಆರ್ಎಸ್ಎಸ್ ಎಂಬುದು ಹಿಟ್ಲರ್ನಿಂದ ಪ್ರಭಾವಿತವಾಗಿ ಸೃಷ್ಟಿಯಾಗಿರುವ ಸಂಸ್ಥೆ. ಭಾರತ ಯಾವಾಗಲು ನಮ್ಮನ್ನು ಬೇಕಂತಲೇ ಟಾರ್ಗೆಟ್ ಮಾಡುತ್ತದೆ. ವಿಶ್ವ ಸಮುದಾಯದ ಕಣ್ಣಲ್ಲಿ ಎಲ್ಲಾ ಮುಸ್ಲಿಮರನ್ನು ಉಗ್ರರನ್ನಾಗಿ ಬಿಂಬಿಸುತ್ತಿದೆ. ಆದರೆ ಪಾಕಿಸ್ತಾನ ಕೂಡ ಉಗ್ರಬಾಧಿತ ದೇಶ ಎಂದು ಭುಟ್ಟೋ ಹೇಳಿಕೆ ನೀಡಿದ್ದಾರೆ.
ಭಾರತಕ್ಕಿಂತ ಹೆಚ್ಚು ಜನರು ಭಯೋತ್ಪಾದನೆಗೆ ಬಲಿಯಾಗಿದ್ದಾರೆ. ಪಾಕಿಸ್ತಾನಕ್ಕೆ ಭಯೋತ್ಪಾದನೆಯನ್ನು ಬೆಂಬಲಿಸಲು ಯಾವುದೇ ಕಾರಣವಿಲ್ಲ. ಒಸಾಮಾ ಬಿನ್ ಲಾಡೆನ್ ಸತ್ತಿದ್ದರೂ, ಗುಜರಾತ್ನ ಕಟುಕ ಇನ್ನೂ ಜೀವಂತವಾಗಿದ್ದಾನೆ. ನರೇಂದ್ರ ಮೋದಿ ಭಾರತದ ಪ್ರಧಾನಿಯಾಗುವುದಕ್ಕೂ ಮೊದಲು ಅಮೆರಿಕ ಪ್ರವೇಶವನ್ನು ನಿಷೇಧಿಸಲಾಗಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಾರೀಕ್ಗಿಂತಲೂ ಸಿಟಿ ರವಿ ರಾಜ್ಯದ ದೊಡ್ಡ ಮಾಸ್ಟರ್ಮೈಂಡ್ ಉಗ್ರ: ಕಿಸಾನ್ ಕಾಂಗ್ರೆಸ್ ಅಧ್ಯಕ್ಷ
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆ ದೆಹಲಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಚಾಣಕ್ಯಪುರಿ ಪೊಲೀಸ್ ಠಾಣೆ ಮುಂಭಾಗದಲ್ಲಿ ಸೇರಿದ ಕಾರ್ಯಕರ್ತರು ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿದ್ದಾರೆ. ವಿದೇಶಾಂಗ ಸಚಿವ ಬಿಲ್ವಾಲಾ ಭಿಟ್ಟೋ ಕ್ಷಮೆಗೆ ಆಗ್ರಹಿಸಿದ್ದಾರೆ. ಪಾಕಿಸ್ತಾನ ರಾಯಭಾರ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಬಿಜೆಪಿ ಕಾರ್ಯಕರ್ತರು ಮೆರವಣಿಗೆ ಹೊರಟಿದ್ದು, ಭದ್ರತೆ ದೃಷ್ಟಿಯಿಂದ ಅವರನ್ನು ಚಾಣಕ್ಯಪುರಿ ಪೊಲೀಸ್ ಠಾಣೆ ಮುಂದೆಯೇ ತಡೆಯುವ ಪ್ರಯತ್ನ ಮಾಡಲಾಗಿದೆ. ಈ ವೇಳೆ ಪೊಲೀಸರು ಹಾಕಿದ ಬ್ಯಾರಿಕೇಡ್ ಹಾರಿ ರಾಯಭಾರಿ ಕಚೇರಿಯತ್ತ ತೆರಳುವ ಪ್ರಯತ್ನ ಪ್ರತಿಭಟನಾಕಾರರು ಮಾಡಿದ್ದಾರೆ. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮದ್ಯ ಕುಡಿದು ಸತ್ತವರಿಗೆ ಪರಿಹಾರ ಕೊಡಲ್ಲ – ಸಿಎಂ ನಿತೀಶ್ ಕುಮಾರ್