ಬೆಂಗಳೂರು: ಭಾವನಾತ್ಮಕ ಮಾತುಗಳ ಮೂಲಕ ಬಿ.ಎಸ್.ಯಡಿಯೂರಪ್ಪ ಅವರು ಮತ್ತೊಮ್ಮೆ ನಾಡಿನ ಜನತೆಯಲ್ಲಿ ಅನುಕಂಪ ಮೂಡಿಸಲು ಮುಂದಾಗಿದ್ದಾರೆ. ಇದು ನಾಟಕೀಯ ಬೆಳವಣಿಗೆಯಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಕಲಾಪದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಿನ ಅಭಿವೃದ್ಧಿಯ ಬಗ್ಗೆ ಅವರು ಮಾತನಾಡಿದ ಪ್ರತಿ ಮಾತುಗಳು ನಾಟಕೀಯವಾಗಿದೆ. ಈ ಬೆಳವಣಿಗೆ ಅವರ ಮುಖ ಭಾವದಲ್ಲಿ ಎದ್ದು ಕಾಣುತ್ತಿತ್ತು. 2008ರಲ್ಲಿ ಅನುಕಂಪದ ಮೂಲಕ ಅವಕಾಶ ಗಿಟ್ಟಿಸಿಕೊಂಡ ಅಧಿಕಾರಕ್ಕೆ ಬಂದಿದ್ದರು. ಆದರೆ ಅದು ಈ ಬಾರಿ ನಡೆಯುವುದಿಲ್ಲ ಎಂದು ಹೇಳಿದರು.
ಸುಪ್ರೀಂ ಕೋರ್ಟ್ 24 ಗಂಟೆಗಳಲ್ಲಿ ಬಹುಮತ ಸಾಬೀತು ಪಡಿಸಬೇಕು ಎಂದು ಆದೇಶ ನೀಡದಿದ್ದರೆ ರಾಜ್ಯದ ಪರಿಸ್ಥಿತಿ ಹದಗೆಡುತ್ತಿತ್ತು. ಒಂದು ವೇಳೆ ಬಿಜೆಪಿಯವರು 15 ದಿನ ಅಧಿಕಾರದಲ್ಲಿದ್ದರೆ ಕುದುರೆ ವ್ಯಾಪಾರ ಮಾಡುತ್ತಿದ್ದರು ಎಂದು ಆರೋಪಿಸಿದರು.
ನಮ್ಮ ಶಾಸಕರಿಗೆ ನಾವು ಅವರ ಕುಟುಂಬದವರ ಜೊತೆ ಮಾತನಾಡಲು ಬಿಡಲಿಲ್ಲ ಎಂದು ಆರೋಪಿಸಿ, ಅನುಕಂಪ ಗಿಟ್ಟಿಸಿಕೊಳ್ಳಲು ಪ್ರತ್ನಿಸಿದ್ದಾರೆ. ಆದರೆ, ಈ ಬೆಳವಣಿಗೆಗೆ ತಾವೇ ಕಾರಣ ಎನ್ನುವುದನ್ನು ಮರೆತಿದ್ದಾರೆ ಎಂದು ಆರೋಪಿಸಿದರು.