ಮೈಸೂರು: ಗುರುವಾರ ಹಸೆಮಣೆ ಏರಬೇಕಿದ್ದ ಬಾಮೈದನನ್ನು ಬಾವ ಕೊಲೆ ಮಾಡಲು ಯತ್ನಿಸಿದ ಪ್ರಕರಣದ ಅಸಲಿ ಕಾರಣ ಈಗ ಬಯಲಾಗಿದೆ. ಕುಡಿಯಬೇಡ ಎಂದು ಬುದ್ದಿ ಹೇಳಿದ್ದಕ್ಕೆ ಬಾಮೈದನ ಮೇಲೆ ದ್ವೇಷವಿಟ್ಟುಕೊಂಡಿದ್ದ ಬಾವ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ ಎಂಬ ಸತ್ಯಾಂಶ ಹೊರಬಿದ್ದಿದೆ.
ಮೈಸೂರಿನ ಹೆಚ್.ಡಿ ಕೋಟೆಯ ಯರಹಳ್ಳಿ ಮನೋಜ್ ಕುಮಾರ್ ಮೇಲೆ ಅವರ ಬಾವ ಕೆಂಡಗಣ್ಣ ಮಚ್ಚಿನಿಂದ ಮಾರಣಾಂತಿಕ ವಾಗಿ ಹಲ್ಲೆ ಮಾಡಿದ್ದಾನೆ. ಕೆಂಡಗಣ್ಣನಿಂದ ಹಲ್ಲೆಗೆ ಒಳಗಾದ ಬಾಮೈದ ಮನೋಜ್ ಕುಮಾರ್ ಸಾವು ಬದುಕಿನ ನಡುವೆ ಹೋರಾಟ ಮಾಡ್ತಿದ್ದಾನೆ. ಹತ್ತು ವರ್ಷದ ಹಿಂದೆ ಮನೋಜ್ ತನ್ನ ತಂಗಿ ತನುಜಾಳನ್ನು ಕೆಂಡಗಣ್ಣನ ಜೊತೆ ಮದುವೆ ಮಾಡಿಸಿದ್ದನು. ಹತ್ತು ವರ್ಷದಿಂದಲೂ ಕೆಂಡಗಣ್ಣ ಪತ್ನಿ ಬಳಿ ಹಣ ಕೇಳುವುದು, ಎಟಿಎಂ ಕಾರ್ಡ್ ಕಿತ್ತುಕೊಳ್ಳುವುದು ಹೀಗೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡು ಬಂದಿದ್ದನು.
ಕುಡಿತದ ವ್ಯಸನಿಯಾಗಿದ್ದ ಕೆಂಡಗಣ್ಣ ಪತ್ನಿ ಬಳಿ ಕಿತ್ತುಕೊಂಡಿದ್ದ ಹಣದಿಂದ ಮದ್ಯ ಕುಡಿಯುತ್ತಿದ್ದನು. ಹೀಗೆ ಕುಡಿದು ಬಾವ ಹಾಳಾಗುತ್ತಿದ್ದಾನಲ್ಲ ಎಂದು ಮನೋಜ್ ಕುಡಿಯ ಬೇಡಿ ಎಂದು ಬಾವನಿಗೆ ಹಲವು ಬಾರಿ ಬುದ್ದಿ ಹೇಳಿದ್ದನು. ಈ ಕಾರಣಕ್ಕೆ ಮನೋಜ್ ಮೇಲೆ ದ್ವೇಷ ಇಟ್ಟುಕೊಂಡಿದ್ದ ಕೆಂಡಗಣ್ಣ ಮನೋಜ್ನನ್ನು ಕೊಲೆ ಮಾಡಲು ಯತ್ನಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಸದ್ಯ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮನೋಜ್ ಹಾಗೂ ಮನೋಜ್ ತಾಯಿ ಹೇಮಲತಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಕೆಂಡಗಣ್ಣ ಹೆಚ್.ಡಿ.ಕೋಟೆ ಪೊಲೀಸರು ಅತಿಥಿಯಾಗಿದ್ದಾನೆ.