ನಟಿ ಸಾಯಿ ಪಲ್ಲವಿ ಆಡಿದ ಮಾತು ಇಷ್ಟು ದೊಡ್ಡಮಟ್ಟದಲ್ಲಿ ಚರ್ಚೆ ಆಗುತ್ತದೆ ಎಂದು ಸ್ವತಃ ಅವರಿಗೂ ಅರಿವಿರಲಿಲ್ಲ ಅನಿಸುತ್ತಿದೆ. ಹೀಗಾಗಿ ನಕ್ಸಲ್ ಹಿನ್ನೆಲೆಯಲ್ಲಿ ಬಂದ ‘ವಿರಾಟ ಪರ್ವಂ’ ಸಿನಿಮಾದ ಪ್ರಚಾರದಲ್ಲಿದ್ದಾಗ ಕೆಲ ವಿವಾದಾತ್ಮಕ ಮಾತುಗಳನ್ನು ಆಡಿದ್ದಾರೆ ಸಾಯಿ ಪಲ್ಲವಿ. ಸಾಯಿ ಪಲ್ಲವಿ ಆಡಿದ ಮಾತು ಅವರಿಗೆ ವಿವಾದಾತ್ಮಕ ಹೇಳಿಕೆ ಎಂದು ಅನಿಸಿದೆಯೋ ಇಲ್ಲವೋ, ಆದರೆ, ಕಾಶ್ಮೀರಿ ಪಂಡಿತರ ಹತ್ಯೆಯನ್ನು ಗೋ ಸಾಗಿಸುತ್ತಿದ್ದ ಮುಸ್ಲಿಂ ವ್ಯಕ್ತಿಯ ಸಾವಿಗೆ ಹೋಲಿಸಿದ್ದು ಮಾತ್ರ ಭಾರೀ ಚರ್ಚೆ ಮೂಡಿಸಿದೆ.
ಸಾಯಿ ಪಲ್ಲವಿ ಅವರ ಮಾತು ಇದೀಗ ಕೇವಲ ಮಾತಾಗಿ ಉಳಿದುಕೊಂಡಿಲ್ಲ. ಕಾನೂನು ಹೋರಾಟಕ್ಕೂ ಕೆಲವರು ಸಜ್ಜಾಗಿದ್ದಾರೆ. ನಿನ್ನೆಯಷ್ಟೇ ಹೈದರಾಬಾದ್ ನಲ್ಲಿ ಇವರ ವಿರುದ್ಧ ದೂರು ದಾಖಲಾಗಿದೆ. ಇದೀಗ ತೆಲಂಗಾಣದ ಗೋಶಮಹಲ್ ಕ್ಷೇತ್ರದ ಬಿಜೆಪಿ ಶಾಸಕ ರಾಜಾ ಸಿಂಗ್ ಕೂಡ ಅಖಾಡಕ್ಕೆ ಇಳಿದಿದ್ದಾರೆ. ಪ್ರತಿಯೊಂದು ಜಿಲ್ಲೆಯಲ್ಲೂ ಸಾಯಿ ಪಲ್ಲವಿ ವಿರುದ್ಧ ದೂರು ದಾಖಲಿಸಿ ಎಂದು ಹೇಳಿಕೆ ನೀಡಿದ್ದಾರೆ. ಈ ಕುರಿತು ವಿಡಿಯೋ ಕೂಡ ಮಾಡಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಬುದ್ದಿಜೀವಿ ವಲಯಕ್ಕೆ ನಟ ಚೇತನ್ ‘ಚಮಚ’ ಅಂದಿದ್ದು ಯಾಕೆ ಮತ್ತು ಯಾರಿಗೆ?
ರಾಜಾ ಸಿಂಗ್ ವಿವಾದಿತ ಶಾಸಕರೆಂದೇ ಫೇಮಸ್. ಫೈಯರ್ ಬ್ರ್ಯಾಂಡ್ ಎಂಎಲ್ಎ ಎಂದೇ ಆ ಭಾಗದಲ್ಲಿ ಖ್ಯಾತರಾದವರು. ಹೀಗಾಗಿ ಸಾಯಿ ಪಲ್ಲವಿಯ ವಿರುದ್ಧ ಕೇಸು ದಾಖಲಿಸುವಂತೆ ಅಭಿಮಾನಿಗಳಿಗೆ ಕರೆ ಕೊಟ್ಟಿದ್ದಾರೆ. ಹಿಂದೂಗಳ ಬಗ್ಗೆ ಮಾತನಾಡುವವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಹತ್ಯೆಯಾದ ಕಾಶ್ಮೀರಿ ಪಂಡಿತರ ಕುಟುಂಬವನ್ನು ಭೇಟಿ ಮಾಡಿ, ಅವರ ನೋವುಗಳನ್ನು ಸಾಯಿ ಪಲ್ಲವಿ ಕೇಳಲಿ ಎಂದು ಸಲಹೆ ನೀಡಿದ್ದಾರೆ. ಹಿಂದೂಗಳನ್ನು ಬೈದರೆ ಪ್ರಚಾರ ಸಿಗುತ್ತದೆ ಎಂಬ ಭ್ರಮೆಯಲ್ಲಿ ಕೆಲವರು ಇದ್ದಾರೆ. ಅವರ ವಿರುದ್ಧ ದೂರು ದಾಖಲಿಸಿ, ಪಾಠ ಕಲಿಸಿ ಎಂದು ಅವರು ಕರೆ ನೀಡಿದ್ದಾರೆ.