ಗಾಂಧಿನಗರ: ಕಾಂಗ್ರೆಸ್ (Congress) ತೊರೆದು ಬಿಜೆಪಿ (BJP) ಸೇರಿದ್ದ ಪಟೀದಾರ್ ಚಳುವಳಿಯ ನಾಯಕ ಹಾರ್ದಿಕ್ ಪಟೇಲ್ಗೆ (Hardik Patel) ಗುಜರಾತ್ ಚುನಾವಣೆಯಲ್ಲಿ (Gujarat Election) ಭರ್ಜರಿ ಜಯ ದೊರೆತಿದೆ.
ವಿರಾಮಗಾಮ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹಾರ್ದಿಕ್ ಪಟೇಲ್ ಅವರು, ಕಾಂಗ್ರೆಸ್ ಲಖಾಭಾಯ್ ಭಾರವಾಡ್ ಅವರನ್ನು 50,000ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದರು. ಆರಂಭದ ಎಣಿಕೆ ಸುತ್ತುಗಳಿಂದಲೂ ಮುನ್ನಡೆ ಕಾಯ್ದುಕೊಂಡು ಬಂದಿದ್ದ ಪಟೇಲ್ ಅವರು ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.
2015ರಲ್ಲಿ ಗುಜರಾತ್ನಲ್ಲಿ ಪಾಟೀದಾರ್ ಸಮುದಾಯದ ಮೀಸಲಾತಿ ಪರ ನಡೆದಿದ್ದ ಪ್ರತಿಭಟನೆಯ ನೇತೃತ್ವ ವಹಿಸುವ ಮೂಲಕ ದೊಡ್ಡ ಸಂಚಲನ ಉಂಟುಮಾಡಿದ್ದ ಹಾರ್ದಿಕ್ ಪಟೇಲ್, ಸಾಕಷ್ಟು ಲೆಕ್ಕಾಚಾರದ ಬಳಿಕ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಅವರನ್ನು ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.
ಆದರೆ ತಮಗೆ ಪಕ್ಷದಲ್ಲಿ ಯಾವುದೇ ಅಧಿಕಾರ ನೀಡುತ್ತಿಲ್ಲ. ಯಾವುದೇ ಸಭೆಗಳಿಗೆ ಆಹ್ವಾನ ನೀಡುತ್ತಿಲ್ಲ ಎಂದು ನಿರಂತರ ಆರೋಪ ಮಾಡುತ್ತಾ ಬಂದಿದ್ದ ಅವರು, ಕ್ರಮೇಣ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಲು ಆರಂಭಿಸಿದ್ದರು. 2022ರ ಮೇ ತಿಂಗಳಲ್ಲಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಕಾರಣ ನೀಡಿ ಉಚ್ಚಾಟನೆ ಮಾಡಲಾಗಿತ್ತು. ಜೂನ್ ತಿಂಗಳಲ್ಲಿ ಅವರು ಬಿಜೆಪಿ ಸೇರ್ಪಡೆಯಾಗಿದ್ದರು. ಇದನ್ನೂ ಓದಿ: ಆಪ್, ಓವೈಸಿ ಪಕ್ಷ ಕೊಟ್ಟ ಹೊಡೆತಕ್ಕೆ ಕಾಂಗ್ರೆಸ್ ಪಲ್ಟಿ
ಈಗಾಗಲೇ ಗುಜರಾತ್ನಲ್ಲಿ ಬಿಜೆಪಿ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಸತತ 7ನೇ ಬಾರಿಗೆ ಗುಜರಾತ್ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ರಚಿಸಲಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದಿದ್ಹೇಗೆ?