– ಎಸಿಬಿ ಆಲ್ ಕಲೆಕ್ಷನ್ ಬ್ಯುರೋ ಆಗಿದೆ
ರಾಯಚೂರು: ಮಾರ್ಚ್ 11ರ ನಂತರ ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ರಾಜಕೀಯ ಧೃವೀಕರಣ ನಡೆಯಲಿದೆ. ಉತ್ತರ ಪ್ರದೇಶದ ಫಲಿತಾಂಶದ ಬಳಿಕ ಬೇರೆ ಬೇರೆ ಪಕ್ಷದ ಹಾಲಿ ಮತ್ತು ಮಾಜಿ ಶಾಸಕರು ಬಿಜೆಪಿಗೆ ಸೇರಲಿದ್ದಾರೆ ಅಂತ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ
ನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ತುಘಲಕ್ ಆಡಳಿತ ನಡೆಯುತ್ತಿದೆ. ನಾವು ಸ್ಟೀಲ್ ಬ್ರಿಡ್ಜ್ ವಿರೋಧಿಗಳಲ್ಲ. 1300 ಕೋಟಿ ಯೋಜನೆಯನ್ನು 2100 ಕೋಟಿ ರೂ. ಗೆ ಕಾಮಗಾರಿ ಕೊಡಲು ಸರ್ಕಾರ ಮುಂದಾಗಿತ್ತು. ಮುಂಗಡವಾಗಿ 65 ಕೋಟಿ ಕಪ್ಪ ತೆಗೆದುಕೊಂಡಿದ್ದಕ್ಕೆ ನಾವು ಈ ಯೋಜನೆಯನ್ನು ವಿರೋಧಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಠೇವಣಿ ಹೋಗುತ್ತೆ: ಹೈಕಮಾಂಡ್ ಗೆ ಕಪ್ಪ ನೀಡಿದ ದಾಖಲೆಯ ಡೈರಿ ನಕಲು ಅಲ್ಲ. ಯಾವ ತನಿಖೆ ಬೇಕಾದ್ರು ನಡೆಸಲಿ ಯಾರು ಯಾರು ಎಷ್ಟು ಹಣ ತಿಂದಿದ್ದಾರೆ ಅನ್ನೋದು ಬೆಳಕಿಗೆ ಬರುತ್ತೆ. ಸಿಎಂ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಅಂತಿದ್ದಾರೆ. ಆದ್ರೆ ಅವರ ಹತ್ತಿರ ನಷ್ಟವಾಗಲು ಏನೂ ಉಳಿದಿಲ್ಲ. ಉಳಿದಿರುವುದು ಠೇವಣಿ ಒಂದೇ. ಅದನ್ನೂ 2018 ರ ಚುನಾವಣೆಯಲ್ಲಿ ಕಳೆದುಕೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದರು.
ಕಲೆಕ್ಷನ್ ಬ್ಯುರೋ: ಎಸಿಬಿ ಯಲ್ಲಿ ಹಲವು ಆರೋಪ ಹೊತ್ತಿರುವವರೇ ಸ್ಥಾನಪಡೆಯುತ್ತಿದ್ದಾರೆ. ದಾಳಿಗೊಳಗಾದವರು ಆಯಾಕಟ್ಟಿನ ಹುದ್ದೆಗಳನ್ನ ಪಡೆಯುತ್ತಾರೆ. ಹೀಗಾಗಿ ಎಸಿಬಿ ಆಲ್ ಕಲೆಕ್ಷನ್ ಬ್ಯೂರೋ ಆಗಿದೆ. ಎಸಿಬಿಯನ್ನು ಕೈಬಿಟ್ಟು ಲೋಕಾಯುಕ್ತವನ್ನು ಬಲಪಡಿಸಿಕೊಡಿ ಅಂತ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ರು.
ಸಾಲ ಮನ್ನಾ ಮಾಡಲಿ: ರಾಜ್ಯದ 160 ತಾಲೂಕಿನಲ್ಲಿ ಭೀಕರ ಬರಗಾಲವಿದೆ. ಹೀಗಾಗಿ ರಾಜ್ಯಸರ್ಕಾರ ಮೊದಲು ತನ್ನ ಕರ್ತವ್ಯ ನಿರ್ವಹಿಸಲಿ. ತನ್ನ ಪಾಲಿನ ಸಾಲ ಮನ್ನಾ ಮಾಡಲಿ. ರಾಜ್ಯ ನಿಯೋಗದ ಜೊತೆ ನಾವು ಕೇಂದ್ರಕ್ಕೆ ಒತ್ತಡ ಹೇರುತ್ತೇವೆ ಅಂತ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.