ಹಾಸನ: ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿಯ ಯಾವ ಶಾಸಕರು ಮತ್ತು ಸಚಿವರು ಭಾಗಿಯಾಗಿದ್ದಾರೆ ಎನ್ನುವುದನ್ನು ಕಾಂಗ್ರೆಸ್ ನಾಯಕರು ಬಹಿರಂಗಪಡಿಸಬೇಕೆಂದು ಹಾಸನ ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಸವಾಲು ಹಾಕಿದ್ದಾರೆ.
ಹಾಸನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಗರಣ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿತ್ತು. ಇದು ಕಾಂಗ್ರೆಸ್ನವರ ಪಾಪದ ಕೂಸು. ಇಚ್ಛಾಶಕ್ತಿ ಇದ್ದಿದ್ದರೆ ಅವರೇ ಹಗರಣದ ಸೂತ್ರದಾರಿಗಳನ್ನು ಬಲಿ ಹಾಕಬಹುದಿತ್ತು ಎಂದರು. ಇದನ್ನೂ ಓದಿ: ಥ್ರೋಬಾಲ್ ಆಡಿ ಗಮನಸೆಳೆದ ನಟಿ ರೋಜಾ
ಈ ಹಗರಣವನ್ನು ಯಾವ ತನಿಖೆಗೆ ವಹಿಸಬೇಕೆನ್ನುವುದನ್ನು ರಾಜ್ಯ ಸರ್ಕಾರ ಶೀಘ್ರವೇ ನಿರ್ಧಾರ ಮಾಡಲಿದೆ. ಈಗಾಗಲೇ ಬಿಟ್ ಕಾಯಿನ್ ವಿಚಾರವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪ್ರಧಾನಮಂತ್ರಿಗಳ ಗಮನಕ್ಕೆ ತಂದಿದ್ದಾರೆ. ಇಡಿ ಮತ್ತು ಆದಾಯ ತೆರಿಗೆ ಇಲಾಖೆಯ ಗಮನಕ್ಕೂ ತಂದಿದ್ದಾರೆ. ಶೀಘ್ರದಲ್ಲಿ ಯಾವ ತನಿಖಾ ಸಂಸ್ಥೆಗೆ ಇದರ ತನಿಖಾ ಜವಾಬ್ದಾರಿ ವಹಿಸಬೇಕೆನ್ನುವುದನ್ನು ನಿರ್ಧರಿಸಲಿದೆ ಎಂದು ಹೇಳಿದರು.
ಪರಿಷತ್ ಚುನಾವಣಾ ಮತ್ತು ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸದಾನಂದ ಗೌಡ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಸೇರಿದಂತೆ ಪ್ರಮುಖರನ್ನು ಒಳಗೊಂಡ ನಾಲ್ಕು ತಂಡಗಳನ್ನು ಮಾಡಲಾಗಿದ್ದು, ರಾಜ್ಯಾದ್ಯಂತ ಪ್ರವಾಸ ನಡೆಸಲಾಗುವುದು ಎಂದು ನುಡಿದರು. ಇದನ್ನೂ ಓದಿ: ಬೀದಿಬದಿ ಮಾಂಸಾಹಾರ ಮಾರಾಟಕ್ಕೆ ನಿರ್ಬಂಧ: ಗುಜರಾತ್ ಸಿಎಂ ಸಮರ್ಥನೆ
ಜಗದೀಶ್ ಶೆಟ್ಟರ್ ನೇತೃತ್ವದ ನಮ್ಮ ತಂಡ ದಾವಣಗೆರೆ, ಚಿತ್ರದುರ್ಗ, ತುಮಕೂರು, ರಾಮನಗರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದೆ ಎಂದರು.
ಇದೇ ವೇಳೆ ಹಾಸನ ಜಿಲ್ಲೆಯಲ್ಲಿ ತೀವ್ರವಾದ ಮಳೆಯಿಂದ ಆಗಿರುವ ಕಾಫಿ ಮತ್ತು ಇತರೆ ಬೆಳೆಗಳ ನಷ್ಟದ ಕುರಿತ ಮುಖ್ಯಮಂತ್ರಿಗಳು, ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸಚಿವರ ಗಮನಕ್ಕೆ ತರಲಾಗುವುದು. ಕಾಡಾನೆ ಹಾವಳಿತಡೆಗೂ ಆದ್ಯ ಗಮನ ಹರಿಸಲಾಗುವುದು ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಕೇರಳದಲ್ಲಿ ಭಾರೀ ಮಳೆ – 8 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ಪರಿಷತ್ ಚುನಾವಣೆಯನ್ನು ನಮ್ಮ ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ನಾಲ್ಕೈದು ಅಭ್ಯರ್ಥಿಗಳ ಹೆಸರು ಹೋಗಿದೆ. ರಾಜ್ಯ ಕೋರ್ ಕಮಿಟಿ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಲಿದೆ. ಹಾಸನ ಜಿಲ್ಲೆಯಲ್ಲಿ ಪಕ್ಷ ಬಲಿಷ್ಠವಾಗಿದ್ದು, ಚುನಾವಣೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಹೇಳಿದರು.