ಪಾಟ್ನಾ: ನಮ್ಮ ಇಲಾಖೆಯಲ್ಲಿರುವ ಅಧಿಕಾರಿಗಳು, ನೌಕರರು ಕಳ್ಳರು. ಈ ಕಳ್ಳರಿಗೆ ನಾನೇ ಸರ್ದಾರ (ಮುಖ್ಯಸ್ಥ) ಎಂದು ಹೇಳಿಕೆ ನೀಡಿ ಚರ್ಚೆಗೆ ಗ್ರಾಸವಾಗಿದ್ದ ಬಿಹಾರದ ಕೃಷಿ ಸಚಿವ ಸುಧಾಕರ್ ಸಿಂಗ್ (Sudhakar Singh) ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ಸಿಂಗ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ರಾಜ್ಯಪಾಲ ಫಾಗು ಚೌಹಾಣ್ ಅವರಿಗೆ ಮಾಹಿತಿ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ (CMO) ಹೇಳಿಕೆಯಲ್ಲಿ ತಿಳಿಸಿದೆ. ಪ್ರವಾಸೋದ್ಯಮ ಸಚಿವ ಕುಮಾರ್ ಸರ್ವಜೀತ್ ಅವರನ್ನು ರಾಜ್ಯದ ನೂತನ ಕೃಷಿ ಸಚಿವರನ್ನಾಗಿ ನೇಮಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯ ಜವಾಬ್ದಾರಿಯನ್ನು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ನಿರ್ವಹಿಸಲಿದ್ದಾರೆ. ಇದನ್ನೂ ಓದಿ: ದುರ್ಗಾ ಪೂಜೆ ವೇಳೆ ಪೆಂಡಾಲ್ಗೆ ಬೆಂಕಿ – ಮಕ್ಕಳು ಸೇರಿದಂತೆ ಐವರು ಸಾವು, 66 ಮಂದಿಗೆ ಗಾಯ
ಜೆಡಿಯು ಸಂಸದೀಯ ಮಂಡಳಿ ಮುಖ್ಯಸ್ಥ ಉಪೇಂದ್ರ ಕುಶ್ವಾಹ ಮಾತನಾಡಿ, ಈ ಬೆಳವಣಿಗೆಯು ಸರ್ಕಾರದ ಮೇಲೆ ಪರಿಣಾಮ ಬೀರುವುದಿಲ್ಲ. ಲಾಲು ಪ್ರಸಾದ್ ಮತ್ತು ತೇಜಸ್ವಿ ಅವರು ರಾಜೀನಾಮೆ ಕೇಳಿದರೆ ನೀಡುತ್ತೇನೆ ಎಂದು ಸುಧಾಕರ್ ಸಿಂಗ್ ಈ ಹಿಂದೆಯೇ ಹೇಳಿದ್ದರು. ಬಹುಶಃ ಅವರಿಗೆ ರಾಜೀನಾಮೆ ನೀಡುವಂತೆ ಕೇಳಿರಬಹುದು ಎಂದು ತಿಳಿಸಿದ್ದಾರೆ.
ಈಚೆಗೆ ಸುಧಾಕರ್ ಸಿಂಗ್ ಅವರು ರೈತರ ಸಮಾವೇಶವೊಂದರಲ್ಲಿ ಮಾತನಾಡುವಾಗ, ನನ್ನ ಇಲಾಖೆಯಲ್ಲಿ ಅನೇಕ ಕಳ್ಳರಿದ್ದು, ಹಣವನ್ನು ದೋಚುತ್ತಿದ್ದಾರೆ. ನಾನು ಇಲಾಖೆಗೆ ಪ್ರಭಾರಿಯಾಗಿರುವುದರಿಂದ ಅವರಿಗೆ ಮುಖ್ಯಸ್ಥನಾಗುತ್ತೇನೆ. ನನಗಿಂತ ಮೇಲಿರುವ ಅನೇಕ ಮುಖ್ಯಸ್ಥರಿದ್ದಾರೆ. ಈ ಸರ್ಕಾರವು ಹಳೆಯದು. ಅದರ ಕಾರ್ಯಶೈಲಿಯೂ ಹಳೆಯದು. ಸರ್ಕಾರವನ್ನು ಎಚ್ಚರಿಸುವುದು ಸಾಮಾನ್ಯ ಜನರ ಕರ್ತವ್ಯ ಎಂದು ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಐಸಿಯುನಲ್ಲಿ ಮುಲಾಯಂ ಸಿಂಗ್ – ಅಖಿಲೇಶ್ಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಮೋದಿ