ಬೀದರ್: ರಾಜ್ಯದ ಬಿಜೆಪಿ ಸರ್ಕಾರ ಹಿಟ್ಲರ್ ಹಾಗೂ ತುಘಲಕ್ ಸರ್ಕಾರ ಇದ್ದಂತೆ ಎಂದು ಮಾಜಿ ಸಚಿವ ಎಂಬಿ ಪಾಟೀಲ್ ರಾಜ್ಯ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೀದರ್ ನ ಬಿವಿ ಭೂಮರೆಡ್ಡಿ ಕಾಲೇಜಿನಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವದಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಎಂಬಿ ಪಾಟೀಲ್ ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಪ್ರಕರಣದ ವಿರುದ್ಧ ಕಿಡಿಕಾರಿದ್ದಾರೆ. ರಾಜ್ಯದ ಮಂಗಳೂರು ಸಾವಿಗೆ ಸಿಎಂ, ಗೃಹ ಮಂತ್ರಿ ಹಾಗೂ ಕಮಿಷನರ್ ಕಾರಣರಾದರೆ ದೇಶಗಳಲ್ಲಿ ಸಂಭವಿಸಿದ ಸಾವು, ನೋವುಗಳಿಗೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಕಾರಣ ಎಂದರು.
ಮಾಜಿ ಸಿಎಂ, ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರನ್ನು ಗಲಭೆ ಸ್ಥಳಕ್ಕೆ ಬಿಡದಿದ್ದಕ್ಕೆ ವಾಗ್ದಾಳಿ ನಡೆಸಿದ ಪಾಟೀಲ್, ವಿರೋಧ ಪಕ್ಷದ ನಾಯಕರು ಎಂದ್ರೆ ಯಾರು? ಇವರ ಕೆಲಸ ಏನು ಗೊತ್ತಾ, ಈ ರೀತಿ ಘಟನೆಗಳು ಆದಾಗ ಸಾಂತ್ವನ ಹೇಳೋದು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದು ಅವರ ಕರ್ತವ್ಯ. ಆದರೆ ಸಿದ್ದರಾಮಯ್ಯರನ್ನು ಸ್ಥಳಕ್ಕೆ ಬಿಡಲೇ ಇಲ್ಲಾ. ಘಟನಾ ಸ್ಥಳಕ್ಕೆ ವಿರೋಧ ಪಕ್ಷದ ನಾಯಕರು ಹೋಗಬಾರದು ಅಂದ್ರೆ ಏನು ಅರ್ಥ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ಗೋಲಿಬಾರ್ ಬಗ್ಗೆ ಕಿಡಿಕಾರಿದ ಎಂಬಿ ಪಾಟೀಲ್, ಎಲ್ಲಾ ಪ್ರಯೋಗಗಳು ಮುಗಿದ ಬಳಿಕ ಗೋಲಿಬಾರ್ ಕಟ್ಟ ಕಡೆಯ ಅಸ್ತ್ರವಾಗಿದೆ. ಆದರೆ ಒಂದೇ ಸಾರಿ ನೇರವಾಗಿ ಗೋಲಿಬಾರ್ ಮಾಡೋದಾ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.