ಬೀದರ್: ಬಿಸಿಲು ತಾಳಲಾರದೇ ಎಎಸ್ಐ ಒಬ್ಬರು ಮೂರ್ಛೆ ತಪ್ಪಿ ಬಿದ್ದ ಘಟನೆ ಗುರುವಾರ ಸಿಎಂ ಗ್ರಾಮ ವಾಸ್ತವ್ಯ ಹೂಡಿರುವ ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದಲ್ಲಿ ನಡೆದಿದೆ.
ಗುರುಮಠಕಲ್ ಠಾಣೆಯ ಎಎಸ್ಐ ರಾಜೇಂದ್ರ ಅವರನ್ನು ಉಜಳಂಬ ಗ್ರಾಮದಲ್ಲಿ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. ರಾಜೇಂದ್ರ ಅವರು ಉಜಳಂಬ ಗ್ರಾಮದ ಹೊರವಲಯದಲ್ಲಿ ವಾಹನ ಪಾರ್ಕಿಂಗ್ ಹಾಗೂ ತಪಾಸಣೆ ನಡೆಸುತ್ತಿದ್ದರು. ಹೀಗಾಗಿ ಭಾರೀ ಬಿಸಿಲು ಇದ್ದರಿಂದ ಅಸ್ವಸ್ಥಗೊಂಡ ಅವರು ಮೂರ್ಛೆ ತಪ್ಪಿ ಬಿದ್ದಿದ್ದರು. ತಕ್ಷಣವೇ ಇದನ್ನು ನೋಡಿದ ಪೊಲೀಸ್ ಸಿಬ್ಬಂದಿ ಅಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಿ, ಚಿಕಿತ್ಸೆ ಕೊಡಿಸಿದ್ದಾರೆ.
ರಾಜೇಂದ್ರ ಅವರಿಗೆ ಮಧುಮೇಹ ಹಾಗೂ ಬಿಪಿ (ರಕ್ತದೊತ್ತಡ) ಸಮಸ್ಯೆ ಇತ್ತು. ಬೆಳಗ್ಗೆಯಿಂದ ಅವರು ಬಿಸಿಲಿನಲ್ಲಿಯೇ ಕೆಲಸ ಮಾಡಿದ್ದರಿಂದ ಆಯಾಸಗೊಂಡು ಬಿದ್ದಿದ್ದಾರೆ ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ. ರಾಜೇಂದ್ರ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಜಳಂಬ ಗ್ರಾಮ ವಾಸ್ತವ್ಯ ಹೂಡುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಅವರಿಗೆ ಅದ್ಧೂರಿಗಾಗಿ ಸ್ವಾಗತ ಕೋರಲು ಆನೆಯನ್ನು ಕರೆತರಲಾಗಿತ್ತು. ಆದರೆ ಆನೆ ಹಾಕಿದ ಹೂವಿನ ಹಾರ ಎರಡು ಬಾರಿಯೂ ಸಿಎಂ ಕೊರಳಿಗೆ ಬೀಳಲಿಲ್ಲ.
ಸಿಎಂ ಅವರಿಗೆ ಹಾರ ಹಾಕಿಸಲೆಂದೇ ಜಿಲ್ಲಾಡಳಿತ ಕಲಬುರಗಿಯ ಕಡಗಂಚಿ ಮಠದ ಆನೆಯನ್ನು ಗ್ರಾಮಕ್ಕೆ ಕರೆತಂದಿತ್ತು. ಇಂದು ಸಿಎಂ ಗ್ರಾಮಕ್ಕೆ ಹೋದಾಗ ಎತ್ತಿನಗಾಡಿ ಮೂಲಕ ಮೆರವಣಿಗೆ ಮಾಡಲಾಯಿತು. ಈ ವೇಳೆ ಸಿಎಂ ಸ್ವಾಗತ ಕೋರಲು ಆನೆಯಿಂದ ಹೂವಿನ ಹಾರ ಹಾಕಿಸಲು ಗ್ರಾಮಸ್ಥರು ಮುಂದಾದರು. ಈ ಸಂದರ್ಭದಲ್ಲಿ ಆನೆ ಹಾರ ಹಾಕಿದ್ದು, ಈ ಹಾರ ಸಿಎಂ ಕೊರಳಿಗೆ ಬೀಳದೇ ನೆಲಕ್ಕೆ ಬಿದ್ದಿದೆ.
https://www.youtube.com/watch?v=Vz3pwT5YEWE
ಮೊದಲ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಮತ್ತೆ ಆನೆಯಿಂದ ಹಾರ ಹಾಕಿಸುವಂತೆ ಅಲ್ಲಿದ್ದ ಜನ ಆಗ್ರಹಿಸಿದ್ದಾರೆ. ಆಗ ಒಲ್ಲದ ಮನಸ್ಸಿನಿಂದ ಸಿಎಂ ಹಾರ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಆಗಲೂ ಆನೆ ಹಾಕಿದ ಹಾರ ಸಿಎಂ ಕೊರಳಿಗೆ ಬೀಳದೇ ಎತ್ತಿನ ಬಂಡಿಯ ಮೇಲೆ ಬಿದ್ದಿದೆ.