ಹಾಸನ: ಭವಾನಿ ಅಕ್ಕ, ಸಂಸದ ಪ್ರಜ್ವಲ್ ರೇವಣ್ಣ ನಶೆಯಲ್ಲಿ ಮಾತಾಡ್ತಾರೆ. ಅವರು ಥರ್ಟಿ, ಸಿಕ್ಸ್ಟಿ ಅಲ್ಲ, 2 ಬಾಟ್ಲಿ ಕುಡಿತಾರೆ. ತಾಯಿ, ಮಗ ಇಬ್ಬರೂ 2 ಗಂಟೆಯವರೆಗೆ ನಶೆ ಏರಿಸಿಕೊಂಡು, ಬೆಳಗ್ಗೆ ಬಂದು ಏನು ಮಾತಾಡ್ತೀವಿ ಎಂಬುದೇ ಗೊತ್ತಾಗಲ್ಲ ಎಂದು ಭವಾನಿ ರೇವಣ್ಣ (Bhavani Revanna) ಹಾಗೂ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ಶಾಸಕ ಪ್ರೀತಂ ಗೌಡ (Preetham Gowda) ಟೀಕಾಪ್ರಹಾರ ನಡೆಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತಂದೆಯವರು ತಮ್ಮ ಇಡೀ ವೃತ್ತಿ ಜೀವನದಲ್ಲಿ ಒಂದೇ ಒಂದು ದಿನ ಬಿಬಿಎಂಪಿ ಕೆಲಸ ಮಾಡಿದ್ರೆ, ಅವರು ಶಿಫಾರಸು ಮಾಡಿದ್ದನ್ನು ತೋರಿಸಿದರೆ ನಾನು ರಾಜೀನಾಮೆ ಕೊಡುತ್ತೇನೆ. ನಾನು ಏನಕ್ಕೆ 5ನೇ ಕ್ಲಾಸ್, 7ನೇ ಕ್ಲಾಸ್ ಅಂತಿನಿ ಅನ್ನೋದು ಇದಕ್ಕೆ. ಅವರಿಗೆ ವಿಷಯ, ವಿಚಾರ ಗೊತ್ತಿಲ್ಲದೆ ಮಾತನಾಡುತ್ತಾರೆ ಎಂದರು.
ಹುಟ್ಟುಗುಣ ಸುಟ್ಟರೂ ಹೋಗಲ್ಲ ಅಂತ ಅಜ್ಜಿ ಒಬ್ಬರು ನನ್ನ ಬಳಿ ಹೇಳಿದ್ರು. ಯಡಿಯೂರು ಗ್ರಾಮಕ್ಕೆ ಹೋದ ವೇಳೆ ವ್ಯಕ್ತಿಯೊಬ್ಬರು ಹೇಳಿದ್ರು. ಅಣ್ಣಾ ಇಬ್ಬರಿಗೂ ರಾತ್ರಿ ನಶೆ ಜಾಸ್ತಿ ಆಗಿರುತ್ತದೆ. ಬೆಳಗ್ಗೆ ಆದರೂ ಇಳಿದಿರಲ್ಲ. ಹೀಗಾಗಿ ಮಾತನಾಡುತ್ತಾರೆ ಅಂತ. ಅಮ್ಮ-ಮಗ ಇಬ್ಬರೂ ಒಂದೇ ತರ ಮಾತನಾಡುತ್ತಾರೆ. ರಾತ್ರಿಯ ನಶೆ ಬೆಳಗ್ಗೆಯಾದರೂ ಇಳಿದಿರಲ್ಲ. ಹೀಗಾಗಿ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ರೇವಣ್ಣ ಅವರು ಮಾತನಾಡಿಲ್ಲ, ಅವರು ಬಹಳ ಸಂಸ್ಕಾರವಂತರು. ದೇವೇಗೌಡರು, ಚನ್ನಮ್ಮ ಅವರಿಗೆ ಸಂಸ್ಕಾರ ಕೊಟ್ಟಿದ್ದಾರೆ. ಇವರಿಗೆ ಸಂಸ್ಕಾರ ಇದೆಯೋ, ಇಲ್ಲವೋ ಗೊತ್ತಿಲ್ಲ. ಸಂಸದರಿಗೆ ಸಂಸ್ಕಾರ ಕಲಿಸಬೇಕಿರುವವರು ತಾಯಿ. ತಾಯಿನೇ ಆ ರೀತಿ ಮಾತನಾಡಿದರೆ ಹೇಗೆ ಎಂದು ಪ್ರಶ್ನಿಸಿದರು.
ನಮ್ಮ ತಾಯಿ ಹುಟ್ಟುವ ಮುಂಚೆ 100 ಎಕರೆ ಖಾತೆದಾರರು, ನಮ್ಮ ತಾಂದೆ ಹುಟ್ಟುವ ಮುಂಚೆ ಹತ್ತಾರು ಎಕರೆ ಖಾತೆದಾರರು. ಸಾಲಿಗ್ರಾಮಕ್ಕೆ ಹೋಗಿ ಅಕ್ಕ ಅವರ ಮನೆಯಲ್ಲಿ ಎಷ್ಟು ಗುಂಟೆ ಜಾಗ ಇತ್ತು ಅಂತ ಕೇಳಿ. ಹೊಳೆನರಸೀಪುರಕ್ಕೆ ಸೊಸೆಯಾಗಿ ಬರುವ ಮುಂಚೆ ಅವರ ಮನೆಯ ಪರಿಸ್ಥಿತಿ ಏನು ಅಂತ ಅವರು ಆತ್ಮ ವಿಮರ್ಶೆ ಮಾಡಿಕೊಳ್ಳಲಿ. ಮೈಸೂರು ಮಹಾರಾಜರು ಏನಾದರೂ ಸಾಲ ಕೊಟ್ಟು ಅವರಿಗೆ ಆಗರ್ಭ ಶ್ರೀಮಂತರಾಗಿದ್ದರಾ? ಭವಾನಿ ಅಕ್ಕ ಮಾತನಾಡೋ ಶೈಲಿ ನೋಡಿದರೆ ಅವರು ಆಗರ್ಭ ಶ್ರೀಮಂತರು ಎನಿಸುತ್ತದೆ ಎಂದು ಟೀಕಿಸಿದರು.
ಅಲ್ಕೋಮೀಟರ್ ಇಟ್ಕೊಂಡಿರಿ, ನೆಕ್ಸ್ಟ್ ಪ್ರೆಸ್ಮೀಟ್ ಬಂದಾಗ ಚೆಕ್ಮಾಡಿ ಏನಾದರೂ ನಶೆ ಇದ್ದರೆ ಏನೂ ಅಂದುಕೊಳ್ಳಬೇಡಿ. ರೇವಣ್ಣ ಅವರು ಮಾತಾಡಲ್ಲ, ಯಾಕೆ ಅಂದರೆ ಅವರು ನಶೆ ಏರಿಸಿಕೊಳ್ಳಲ್ಲ. ಭವಾನಿ ಅಕ್ಕ, ಎಂಪಿ ನಶೆ ಮೇಲೆ ಮಾತಾಡಿದ್ದಾರೆ. ಈ ಬಗ್ಗೆ ಹಾಸನ ಕ್ಷೇತ್ರದ ಜನರು, ಇಡೀ ರಾಜ್ಯದ ಜನರು ಮಾತನಾಡುತ್ತಿದ್ದಾರೆ. ರೇವಣ್ಣ ಈ ನಶೆಯರ ಮಧ್ಯೆ ಸಿಲುಕಿಕೊಂಡು ನರಳಿ ಹೋಗಿದ್ದಾರೆ ಎಂದರು. ಇದನ್ನೂ ಓದಿ: ಶಾಸಕ ಪ್ರೀತಂಗೌಡ ವಿರುದ್ಧ ಏಕವಚನದಲ್ಲಿ ಹರಿಹಾಯ್ದ ಭವಾನಿ ರೇವಣ್ಣ
ನಮ್ಮ ತಾಯಿ ಬಿಎ, ನಮ್ಮ ತಂದೆ ಬಿಇ ಓದಿದ್ದಾರೆ. ಹಾಗಾಗಿ ನಮಗೆ ಸಂಸ್ಕಾರ ಕಲಿಸಿಕೊಟ್ಟಿದ್ದಾರೆ. ಎಲ್ಲಾ ಅಧಿಕಾರಿಗಳಿಗೆ ಕೈಮುಗಿದು ಕೇಳಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಆ ಕುಟುಂಬದ ಹತ್ತಿರ ಹೋಗಬೇಡಿ. ಸಹಾಯ ಪಡೆಯದಿರುವ ಶಾಸಕರ ತಂದೆ ಬಗ್ಗೆಯೇ ಮಾತನಾಡುತ್ತಾರೆ ಎಂದರೆ, ಸಾಮಾನ್ಯ ನೌಕರರ ಪಾಡು ಏನಾಗಬೇಕು? ಅಪ್ಪಿ ತಪ್ಪಿ ಅವರ ಮನೆ ಬಾಗಿಲಿಗೆ ಹೋಗಬೇಡಿ. ಯಾವುದು ಶಿಫಾರಸು ತಗೋಬೇಡಿ. ನಿಮ್ಮ ಜೀವನ ನಡಿತಿರೋದೇ ಅವರಿಂದ ಎನ್ನುತ್ತಾರೆ. ಬಹಳ ಎಚ್ಚರಿಕೆಯಿಂದ ಇರಿ ಎಂದರು.
ಅನಿತಕ್ಕ ಬಂದರೆ, ಆ ಅಕ್ಕನನ್ನು ನೋಡಿ ಎರಡು ಕೈ ಮುಗಿದು ಬನ್ನಿ ಅಕ್ಕ ಅಂತ ಕರಿಬೇಕು ಅನ್ಸುತ್ತೆ. ತುಂಬಿದ ಕೊಡ ತುಳುಕುವುದಿಲ್ಲ. ಅನಿತಕ್ಕನ ಬಗ್ಗೆ ಮಾತನಾಡಲು ಆಗುತ್ತ? ಅನಿತಕ್ಕ ಸಂಸ್ಕಾರವಂತರಿದ್ದಾರೆ. ದೇವೇಗೌಡರು ಮಾಜಿ ಪ್ರಧಾನಿಗಳು, ಅವರ ಸೊಸೆ ನಾನೇ ಮಾಜಿ ಪ್ರಧಾನಿ ಅಂತ ತಲೇಲಿ ಇಟ್ಟುಕೊಂಡಿದ್ದಾರೆ. ಅವರ ಮೊಮ್ಮಗ ಬರೀ ಎಂಪಿ, ನಾನೇ ಮಾಜಿ ಪ್ರಧಾನಿ ಅನ್ನೋ ನಿಟ್ಟಿನಲ್ಲಿ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಚುನಾವಣಾ ಗಿಮಿಕ್ಗಾಗಿ ರಥಯಾತ್ರೆಗಳು ನಡೆಯುತ್ತಿವೆ : ಆರ್.ಅಶೋಕ್