ಬೆಂಗಳೂರು: ವಿವಿಧ ಸಬೂಬು ಹೇಳಿಕೊಂಡು ಶ್ರೀಮಂತರ ಮನೆಗೆಳಿಗೆ ಎಂಟ್ರಿಯಾಗಿ ಮನೆ ಮಾಲೀಕರ ನಂಬಿಕೆ ಗಳಿಸಿಕೊಂಡು ದ್ರೋಹ ಎಸಗಿ ಬರುತ್ತಿದ್ದ ಐನಾತಿ ಕಳ್ಳಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಗ್ರೇಸಿ ಬಂಧಿತ ಐನಾತಿ ಕಳ್ಳಿ. ಗ್ರೇಸಿ ಬೆಂಗಳೂರಿನ ಶ್ರೀರಾಂಪುರದ ನಿವಾಸಿಯಾಗಿದ್ದು, ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ನಂತರ ವಿಲಾಸಿ ಜೀವನಕ್ಕೆ ಬಿದ್ದ ಗ್ರೇಸಿ ಮನೆ ಕಳ್ಳತನಕ್ಕೆ ಪ್ಲಾನ್ ಹಾಕಿಕೊಂಡಿದ್ದಳು. ರಾಜಾಜಿನಗರದ ಪ್ರಕಾಶ್ ನಗರದಲ್ಲಿರುವ ಮನೆಗೆ ಹೋಗಿ ಮನೆ ಕೆಲಸ ಕೇಳಿಕೊಂಡು ಹೋಗಿದ್ದಳು. ಮನೆ ಕೆಲಸಕ್ಕೆ ಮಾಲೀಕರು ಒಪ್ಪಿಕೊಂಡ ಮೇಲೆ ಕೆಲ ದಿನಗಳ ಕಾಲ ಕೆಲಸ ಮಾಡಿ ಮನೆ ಕೆಲಸದ ಜೊತೆಗೆ ಮನೆಯಲ್ಲಿರುವ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಳು. ಇದನ್ನೂ ಓದಿ: ಸರ್ಕಾರಿ ಉದ್ಯೋಗದ ಆಮಿಷವೊಡ್ಡಿ ಮಹಿಳೆಯಿಂದ ವಂಚನೆ
ಘಟನೆ ಸಂಬಂಧ ಮನೆ ಮಾಲೀಕರು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಿಸಿದ್ದಾರೆ. ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದಾಗ ಆರೋಪಿ ಗ್ರೇಸಿ ಬೈಕ್ನಲ್ಲಿ ಬಂದು ಕಳ್ಳತನ ಮಾಡಿಕೊಂಡು ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿ ಗ್ರೇಸಿಯನ್ನು ಬಂಧಿಸಿ ಕಳ್ಳತನ ಮಾಡಿಕೊಂಡು ಹೋಗಿದ್ದ ಮೂರು ಲಕ್ಷ ಬೆಲೆ ಬಾಳುವ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.