ಬೆಂಗಳೂರು: ರೌಡಿಶೀಟರ್ ಲಕ್ಷ್ಮಣನ ಕೊಲೆ ನಂತರ ಅಪರಾಧ ಲೋಕಕ್ಕೆ ನಾನೇ ಅಧಿಪತಿ ಎಂದು ಮೆರೆಯುತ್ತಿದ್ದ ರೌಡಿಶೀಟರ್ ಸ್ಲಂ ಭರತನನ್ನು ಬೆಂಗಳೂರು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ರೌಡಿ ಲಕ್ಷ್ಮಣ ಕೊಲೆಯಾದ ನಂತರ ಎಲ್ಲ ಡೀಲ್ ಗಳು ನನಗೇ ಬರಬೇಕು, ನಾನೇ ಎಲ್ಲ ಡೀಲ್ ಗಳನ್ನು ಮಾಡುತ್ತೇನೆ ಎಂದು ಲಕ್ಷ್ಮಣ ಮಾಡುತ್ತಿದ್ದ ವ್ಯವಹಾರಗಳಿಗೆ ಭರತ ಕೈ ಹಾಕಿದ್ದ. ಅಲ್ಲದೆ ಹಫ್ತಾ ವಸೂಲಿಗೆ ಇಳಿದಿದ್ದ, ಅಲ್ಲದೆ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಪೊಲೀಸರ ಮೇಲೆಯೇ ವಾಹನ ಹತ್ತಿಸೋಕೆ ಬಂದು ಎಸ್ಕೇಪ್ ಆಗಿದ್ದ. ಇದೀಗ ಸ್ಲಂ ಭರತನನ್ನು ಉತ್ತರ ಪ್ರದೇಶದ ಮುರದಾಬಾದ್ನಲ್ಲಿ ಬಂಧಿಸಲಾಗಿದೆ.
ಸ್ಲಂ ಭರತ ತನ್ನ ಗೆಳತಿಯೊಂದಿಗೆ ಮುರದಾಬಾದ್ ನಲ್ಲಿ ಇರುವ ವಿಚಾರ ತಿಳಿದ ಬೆಂಗಳೂರು ಪೊಲೀಸರು ಉತ್ತರ ಪ್ರದೇಶದ ಮುರದಾಬಾದ್ ಗೆ ತೆರಳಿದ್ದರು. ಈ ವೇಳೆ ಪೊಲೀಸರನ್ನು ರೌಡಿಗಳು ಎಂದು ಬಿಂಬಿಸಿದ ಸ್ಲಂ ಭರತ ಸುಮಾರು 300ಕ್ಕೂ ಹೆಚ್ಚು ರೌಡಿಗಳನ್ನು ಬಳಸಿಕೊಂಡು ಪೊಲೀಸರ ಮೇಲೆ ಅಟ್ಯಾಕ್ ಮಾಡಿಸಿದ್ದ. ಈ ವೇಳೆ ಸ್ಥಳೀಯ ಪೊಲೀಸರ ನೆರವು ಪಡೆದ ಪೊಲೀಸರು ಸ್ಲಂ ಭರತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನಲ್ಲೇ ಸ್ಲಂ ಭರತನ ಮೇಲೆ 50ಕ್ಕೂ ಹೆಚ್ಚು ಕೇಸುಗಳು ದಾಖಲಾಗಿದ್ದು, ಕಳೆದ ತಿಂಗಳಲ್ಲಿ ರಾಜಗೋಪಾಲ ನಗರದ ಶ್ರೀನಿವಾಸ ಅವರು ಹಫ್ತಾ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಮನೆ ಮುಂದೆ ನಿಲ್ಲಿಸಿದ್ದ ಮೂರು ಕಾರುಗಳನ್ನು ಜಖಂ ಮಾಡಿಸಿದ್ದ. ಈ ಸಂಬಂಧ ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಸ್ಲಂ ಭರತನಿಗಾಗಿ ಹುಡುಕಾಟ ನಡೆದಿತ್ತು.