ಬೆಂಗಳೂರು: ನಿರೂಪಕಿ ಅನುಶ್ರೀ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ತಮ್ಮ ವೃತ್ತಿ ಜೀವನದ ಆರಂಭದ ದಿನಗಳನ್ನು ಮೆಲುಕು ಹಾಕಿಕೊಂಡು ಕಣ್ಣೀರು ಹಾಕಿದ್ದಾರೆ.
ಮೊದಲಿಗೆ ಬೆಂಗಳೂರಿಗೆ ಬಂದಾಗ ಇಲ್ಲಿ ಸಂಬಳ ಏನೂ ಸಾಕಾಗಲ್ಲ. ನಾನು ವಾಪಸ್ ಬರ್ತೀನಿ ಎಂದು ಅಮ್ಮನಿಗೆ ಎಸ್ಟಿಡಿ ಮಾಡಿದೆ. ಆದ್ರೆ ಅಮ್ಮ ನೀನು ಸೋತು ಮನೆಗೆ ಬರಬೇಡ. ಗೆದ್ದು ಬಾ ಅಥವಾ ಪ್ರಯತ್ನ ಮಾಡಿಯಾದ್ರೂ ಬಾ ಅಂತ ಹೇಳಿರುವುದಾಗಿ ತಿಳಿಸಿದರು.
ರಿಯಾಲಿಟಿ ಶೋನಲ್ಲಿ ಕೂಡು ಕುಟುಂಬ ನೋಡಿದಾಗ ಭಾವುಕರಾದ ಅನುಶ್ರೀ, ನಾನು 10 ವರ್ಷ ಪಿಜಿಯಲ್ಲಿದ್ದೆ. ಶೂಟಿಂಗ್ ಮುಗಿಸಿಕೊಂಡು ಬಂದಾಗ ನಮಗೆ ಬಾಗಿಲು ತೆಗೆಯುವವರು ಯಾರೂ ಇರಲ್ಲ. ಊಟ ಮಾಡಿದ್ರಾ, ಹುಷಾರ್ ಇದ್ದೀರಾ ಕೇಳುವವರೂ ಇರಲಿಲ್ಲ. ಎಷ್ಟೋ ಬಾರಿ ಇದನ್ನೇ ನೆನಪು ಮಾಡಿಕೊಂಡು ರಾತ್ರಿ ಊಟ ಸಹ ಮಾಡದೇ ಮಲಗಿಕೊಂಡಿದ್ದೇನೆ. ಆ ಒಂಟಿತನ ಬೆಂಗಳೂರಿಗೆ ಬಂದಾಗ ನನ್ನನ್ನು ಕಾಡಿತ್ತು. ಏನೇ ಜಗಳ ಇರಲಿ, ಮನೆಯಲ್ಲಿರಬೇಕು ಎಂಬುದು ನನ್ನ ಅಭಿಪ್ರಾಯ. ಇದನ್ನೂ ಓದಿ: ಸುಷ್ಮಾ ನೀಡಿದ 250 ರೂ. ನೋಡಿ ಕಣ್ಣೀರಿಟ್ಟ ಅನುಶ್ರೀ
ಒಂದು ಬಾರಿ ನನಗೆ ಹುಷಾರ್ ಇರಲಿಲ್ಲ. ಒಬ್ಬಳೇ ಆಸ್ಪತ್ರೆಗೆ ಹೋಗಿದ್ದೆ. ದೇಹದಲ್ಲಿ ಸಣ್ಣ ಇನ್ಪೆಕ್ಷನ್ ಅಂತ ಅನ್ಕೊಂಡು ಹೋದೆ. ಚಿಕಿತ್ಸೆ ಮಾಡುವಾಗ ನೋವು ಆಗುತ್ತೆ ಅನ್ನೋದು ಗೊತ್ತಿರಲಿಲ್ಲ. ವೈದ್ಯರು ಟ್ರೀಟ್ ಮಾಡುವಾಗ ನನ್ನ ಕೈ ಹಿಡಿದುಕೊಳ್ಳಲು ಯಾರೂ ಇಲ್ಲ ಅನ್ನೋ ನೋವು ನನ್ನನ್ನು ತುಂಬಾ ಕುಂದಿಸ್ತು. ಅದೇ ನೋವಿನಲ್ಲಿ ಮಲ್ಲೇಶ್ವರಂನಲ್ಲಿದ್ದ ಆಸ್ಪತ್ರೆಯಿಂದ ಹೊರ ಬಂದು ಆಟೋ ಹತ್ತಿ ಹಲ್ಲನ್ನು ಬಿಗಿ ಹಿಡಿದು ಹಾಸ್ಟೆಲ್ ವರೆಗೂ ಹೋದೆ. ಆವತ್ತೇ ಫಸ್ಟ್ ಟೈಂ ಜೋರಾಗಿ ಅತ್ತಿದ್ದು. ಬೆಂಗಳೂರಿನಲ್ಲಿ ನನಗೆ ಅಂತ ಯಾರೂ ಇಲ್ಲವಲ್ಲ ಎಂಬ ನೋವು ಕಾಡಿತ್ತು. ಅವತ್ತು ಸಹ ಅಮ್ಮನಿಗೆ ಫೋನ್ ಮಾಡಿ ಕಣ್ಣೀರು ಹಾಕಿದ್ದೆ.
ಗುಂಡ್ಲುಪೇಟೆಯ ಈ ಕುಟುಂಬದವರು ಅದೃಷ್ಟವಂತರು. ಒಂದೇ ಮನೆಯಲ್ಲಿ 47 ಜನರು ವಾಸವಾಗಿರುವ ವಿಷಯ ಕೇಳಿ ಮತ್ತು ಈ ತುಂಬು ಕುಟುಂಬ ನೋಡಿ ಖುಷಿಯಾಯ್ತು. ಜೊತೆಯಲ್ಲಿ ಕುಳಿತು ಮಾತಾಡ್ತಾ ಊಟ ಮಾಡ್ತೀರಿ. ಒಂದು ಮಾತು ಬರುತ್ತೆ ಹೋಗುತ್ತೆ. ರಾತ್ರಿ ಮಲಗಿದ ವ್ಯಕ್ತಿ ಬೆಳಗ್ಗೆ ಏಳುತ್ತಾನೆ ಎಂಬುವುದು ಯಾರಿಗೂ ಗೊತ್ತಿಲ್ಲ ಅಂತ ಬೇಸರ ವ್ಯಕ್ತಪಡಿಸಿದರು.