ಲಕ್ನೋ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಸೋಲನುಭವಿಸಿದ್ದ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡಕ್ಕೆ ಡಬಲ್ ಶಾಕ್ ಕೊಟ್ಟಂತಾಗಿದೆ. ಲಕ್ನೋ ತಂಡದ ಇಬ್ಬರು ಪ್ರಮುಖ ಆಟಗಾರರು ಐಪಿಎಲ್ 2023ನಿಂದಲೇ (IPL 2023) ಹೊರಗುಳಿಯಲಿದ್ದಾರೆ.
9 ಪಂದ್ಯಗಳನ್ನಾಡಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವು 5ರಲ್ಲಿ ಗೆಲುವು ಸಾಧಿಸಿದ್ದು, 4 ಪಂದ್ಯಗಳಲ್ಲಿ ಸೋತಿದೆ. ಸದ್ಯ ಪಾಂಯಿಂಟ್ಸ್ ಪಟ್ಟಿಯಲ್ಲಿ 3 ಸ್ಥಾನದಲ್ಲಿರುವ ಲಕ್ನೋ ಪ್ಲೇ ಆಫ್ ತಲುಪಲು ಉಳಿದ 5 ಪಂದ್ಯಗಳಲ್ಲಿ 3ರಲ್ಲಿ ಗೆಲುವು ಸಾಧಿಸಬೇಕಿದೆ. ಈ ನಡುವೆ ನಾಯಕ ಕೆ.ಎಲ್ ರಾಹುಲ್ (KL Rahul) ಹಾಗೂ ಜಯದೇವ್ ಉನಾದ್ಕಟ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಟೂರ್ನಿಯಿಂದ ಹೊರಗುಳಿಯುವ ಸಾಧ್ಯತೆ ಎದುರಾಗಿದೆ. ಇದನ್ನೂ ಓದಿ: ಯಾರಾದ್ರು ಕೊಟ್ರೆ ನಾವೂ ತಿರುಗಿಸಿ ಕೊಡ್ತೀವಿ – ಮತ್ತೆ ಗಂಭೀರ್ಗೆ ಕೌಂಟರ್ ಕೊಟ್ಟ ಕಿಂಗ್ ಕೊಹ್ಲಿ
ಸೋಮವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಪಂದ್ಯದ ವೇಳೆ ಬೌಂಡರಿ ತಡೆಯುವ ಪ್ರಯತ್ನದಲ್ಲಿ ಕೆ.ಎಲ್ ರಾಹುಲ್ ಬೌಂಡರಿ ತಡೆಯಲು ಮುಂದಾದಾಗ ನೆಲಕ್ಕೆ ಉರುಳಿದ್ದರು. ಈ ವೇಳೆ ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರು. ನೋವು ತಾಳಲಾರದೆ ಅವರು, ತಮ್ಮ ತಂಡದ ಸಹಾಯಕ ಸಿಬ್ಬಂದಿ ನೆರವಿನಿಂದ ಮೈದಾನ ತೊರೆದಿದ್ದರು. ಇದಾದ ಬಳಿಕ ಅವರು ಫೀಲ್ಡಿಂಗ್ಗೆ ಮರಳಲೇ ಇಲ್ಲ. ಕೊನೆಗೆ 19ನೇ ಓವರ್ನಲ್ಲಿ ಇನ್ನೂ ಮೂರು ಎಸೆತಗಳು ಬಾಕಿಯಿದ್ದಾಗ ಮತ್ತೆ ನೋವಿನಲ್ಲೂ ಕಣಕ್ಕಿಳಿದಿದ್ದರು. ಮೂರು ಎಸೆತಗಳನ್ನ ಎದುರಿಸಿದರೂ ಯಾವುದೇ ರನ್ ಕದಿಯಲು ಆಗಲಿಲ್ಲ.
ಗಾಯಕ್ಕೆ ತುತ್ತಾಗಿರುವ ಕೆ.ಎಲ್ ರಾಹುಲ್ ಅವರನ್ನು ಲಕ್ನೋ ಫ್ರಾಂಚೈಸಿಯಿಂದ ಬಿಸಿಸಿಐ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಕೆ.ಎಲ್ ರಾಹುಲ್ ಅವರ ಗಾಯ ಗಂಭೀರವಾಗಿದ್ದರೆ, ಟೂರ್ನಿಯಿಂದ ಹೊರ ಬೀಳುವ ಸಾಧ್ಯತೆ ಇದೆ. ಇಲ್ಲವಾದಲ್ಲಿ ಅವರು ಕೆಲ ಪಂದ್ಯಗಳ ಬಳಿಕ ತಂಡದಲ್ಲಿ ಮುಂದುವರಿಯಲಿದ್ದಾರೆ ಎಂದು ಐಪಿಎಲ್ ಮಂಡಳಿ ತಿಳಿಸಿದೆ. ಇದನ್ನೂ ಓದಿ: ನವೀನ್ ವಿರುದ್ಧ ಕಿತ್ತಾಡಿದ್ದಕ್ಕೆ ಕೊಹ್ಲಿಗೆ 1.07 ಕೋಟಿ ಲಾಸ್ – ಕೊಹ್ಲಿ, ಗಂಭೀರ್ ಕಿರಿಕ್ಗೆ ಕಾರಣ ಏನು?
ಈಗಾಗಲೇ ಕೆ.ಎಲ್ ರಾಹುಲ್ ಅವರ ಗಾಯದ ಭಾಗವನ್ನು ಸ್ಕ್ಯಾನ್ಗೆ ಒಳಪಡಿಸಲಾಗಿದ್ದು, ಅವರಿಗೆ ನೋವು ಇನ್ನೂ ಕಡಿಮೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ಕೆಲ ಪಂದ್ಯಗಳಿಗೆ ಅವರು ಅಲಭ್ಯರಾಗಲಿದ್ದಾರೆ. ಕೆ.ಎಲ್ ರಾಹುಲ್ ಅವರ ಗಾಯದ ಪರಿಸ್ಥಿತಿಯನ್ನು ಆಧರಿಸಿ ಬಿಸಿಸಿಐ ಹಾಗೂ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಲಕ್ನೋ ನಾಯಕನ ಐಪಿಎಲ್ ಟೂರ್ನಿಯಲ್ಲಿ ಮುಂದುವರಿಯಬೇಕಾ? ಅಥವಾ ಬೇಡವಾ? ಎಂಬುದನ್ನು ತೀರ್ಮಾನಿಸಲಿದೆ.
ಜಯದೇವ್ ಉನದ್ಕತ್ ಅವರ ವಿಷಯದಲ್ಲಿಯೂ ಕಠಿಣ ತೀರ್ಮಾನಕ್ಕೆ ಬಿಸಿಸಿಐ ಮುಂದಾಗುತ್ತಿದೆ. ಅವರ ಭುಜದ ಸ್ಥಿತಿ ಉತ್ತಮವಾಗಿಲ್ಲ. ಹಾಗಾಗಿ ಅವರು ಮುಂದೆ ಐಪಿಎಲ್ನಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲೂ ಸ್ಥಾನ ಕಳೆದುಕೊಳ್ಳುವ ಸ್ಥಾನವಿದೆ ಎಂದು ಹೇಳಲಾಗಿದೆ.