– ಸಿದ್ದರಾಮ್ಯಯಗೆ ಅನ್ನದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ
ಹಾವೇರಿ: ಕರ್ನಾಟಕದ ಜನತೆ ಸಿದ್ದರಾಮಯ್ಯನವರನ್ನ (Siddaramaiah) ಅಧಿಕಾರಕ್ಕೆ ತಂದಿದ್ದಾರೆ. ಯಾರು ಅಧಿಕಾರಕ್ಕೆ ತಂದಿದ್ದಾರೋ ಅವರು ಈಗ ಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಧಾವಿಸುವ ಕೆಲಸ ಅವರದ್ದು. ಪ್ರವಾಹ ಬಂದಾಗ ನಾವು ಯಾರನ್ನೂ ಕಾಯದೆ ಎರಡು ಬಾರಿ ಪರಿಹಾರ ನೀಡಿ ನಮ್ಮ ಗಂಡಸ್ತನ ನಾವು ತೋರಿಸಿದ್ದೇವೆ. ಈಗ ಬರ ಪರಿಹಾರ ನೀಡಿ ಗಂಡಸ್ತನ ತೋರಿಸಲಿ ಎಂದು ಮಾಜಿ ಸಿಎಂ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ (BJP ) ಅಭ್ಯರ್ಥಿ ಬಸವರಾಜ ಬೊಮ್ಮಾಯಿ (Basavaraj Bommai) ಸವಾಲು ಹಾಕಿದ್ದಾರೆ.
ಹಾನಗಲ್ನ ಆಡೂರು ಗ್ರಾಮದಲ್ಲಿ ಮತಯಾಚನೆ ವೇಳೆ ಮಾತಾಡಿದ ಅವರು, ನಾವು 17 ಲಕ್ಷ ಜನರಿಗೆ ಪರಿಹಾರ ನೀಡಿದ್ದೇವೆ. ಪರಿಹಾರ ನೀಡುವಾಗ ನಾವು ಯಾರ ಕಡೆಗೂ ಬೊಟ್ಟು ಮಾಡಿ ತೋರಿಸಿಲ್ಲ. ಅದು ನಿಜವಾದ ಗಂಡಸ್ತನ. ಮೊದಲು ರೈತರಿಗೆ ಪರಿಹಾರ ಕೊಡಲಿ, ಆ ಮೇಲೆ ಕೇಂದ್ರದಿಂದ ಪರಿಹಾರ ಬಂದೆ ಬರುತ್ತದೆ. ರೈತರಿಗೆ ಪರಿಹಾರ ಕೊಡಲು ಖಜಾನೆ ಖಾಲಿಯಾಗಿದೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಹೇಳುತ್ತಿದ್ದಾರೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಾ.ಮಂಜುನಾಥ್ ಆಸ್ತಿ ಎಷ್ಟು ಗೊತ್ತಾ?
ನಾವು ರಾಮನ ಹೆಸರು ಹೇಳುತ್ತೇವೆ. ರಾಮರಾಜ್ಯವನ್ನ ಮಾಡುತ್ತೇವೆ. ಕರ್ನಾಟಕಕ್ಕೆ ಬರುತ್ತಿರುವುದು ನರೇಂದ್ರ ಮೋದಿ ಕೊಟ್ಟಿರುವ ಅಕ್ಕಿ. ಅನ್ನ ನೀಡಿದ್ದು ನರೇಂದ್ರ ಮೋದಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಕಾಳು ಅಕ್ಕಿಯನ್ನೂ ಕೊಟ್ಟಿಲ್ಲ. ಅವರಿಗೆ ಅನ್ನದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಎಸ್ಡಿಪಿಐ ಕಾಂಗ್ರೆಸ್ (Congress) ಹುಟ್ಟುಹಾಕಿದ ಮರಿ. ಕಾಂಗ್ರೆಸ್ನ ರಾಜಕಾರಣದಿಂದ ಉದ್ಭವಿಸಿದ ಮರಿ. ಅವರು ಅದಕ್ಕೆ ಕಾಂಗ್ರೆಸ್ಗೆ ಬೆಂಬಲ ನೀಡಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ನೀವು ಕಣ್ಣು ಮುಚ್ಚುವುದರಿಂದ ಜಗತ್ತು ಕತ್ತಲೆಯಾಗುವುದಿಲ್ಲ: ಮಮತಾ ಸರ್ಕಾರಕ್ಕೆ ಹೈಕೋರ್ಟ್ ಚಾಟಿ