ಚಿಕ್ಕಬಳ್ಳಾಪುರ: ಆನ್ಲೈನ್ ಕ್ಯಾಸಿನೋ (Online Casino) ಬೆಟ್ಟಿಂಗ್ ಹುಚ್ಚಿನಿಂದಾಗಿ ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಬ್ಯಾಂಕ್ನಲ್ಲಿ ಹಣ ದೋಚಿ ಪರಾರಿಯಾಗಿದ್ದ, ಅದೇ ಬ್ಯಾಂಕ್ ಮ್ಯಾನೇಜರ್ನನ್ನು (Bank Manager) ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ಗೌರಿಬಿದನೂರು ನಗರದ ಕಲ್ಲೂಡಿ ಶಾಖೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್ನ ಮ್ಯಾನೇಜರ್ ಮಣೀಂದ್ರ ರೆಡ್ಡಿ ಜೈಲುಪಾಲಾದ ವ್ಯಕ್ತಿ. ಈತ ಬ್ಯಾಂಕ್ನ ಗ್ರಾಹಕರ ಖಾತೆಯಲ್ಲಿದ್ದ 1,53,83,000 ರೂ. ಹಣವನ್ನು ದೋಚಿ ಪರಾರಿಯಾಗಿದ್ದ. ಈತನನ್ನ ಬಂಧಿಸಿ ಜೈಲುಗಟ್ಟುವಲ್ಲಿ ಚಿಕ್ಕಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಸ್ನೇಹಿತನಿಗೆ ಕಾರು ನೀಡದೇ ಕಿರಿಕ್- ನಲಪಾಡ್ ವಿರುದ್ಧ ದೂರು
ಆನ್ಲೈನ್ ಕ್ಯಾಸಿನೊ ಬೆಟ್ಟಿಂಗ್ ಹುಚ್ಚು ಅಂಟಿಸಿಕೊಂಡಿದ್ದ ಈ ಭೂಪ ಬರೋಬ್ಬರಿ 1.53 ಕೋಟಿ ರೂ. ಹಣವನ್ನು ಕಳೆದುಕೊಂಡಿದ್ದ. ಬ್ಯಾಂಕ್ನ 12 ಗ್ರಾಹಕರ ಅಕೌಂಟ್ನಲ್ಲಿದ್ದ ಹಣ ಹಾಗೂ ಗ್ರಾಹಕರ ಹೆಸರಿನಲ್ಲಿ ತಾನೇ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾಲದ ರೂಪದಲ್ಲಿ ಹಣ ಡ್ರಾ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಕಷ್ಟಕ್ಕೆ ಅಂತ ಬ್ಯಾಂಕ್ನಲ್ಲಿ ಎಫ್ಡಿ ಮಾಡಿದ್ದ ಇಬ್ಬರು ಗ್ರಾಹಕರ ಹಣವನ್ನು ಆನ್ಲೈನ್ ಗೇಮ್ನಲ್ಲಿ ತೊಡಗಿಸಿ, ಗ್ರಾಹಕರ ಅಕೌಂಟ್ಗಳನ್ನು ಖಾಲಿ ಮಾಡಿದ್ದ.
ಮಣೀಂದ್ರ ರೆಡ್ಡಿ ವಿರುದ್ಧ, ಕರ್ನಾಟಕ ಗ್ರಾಮೀಣ ಬ್ಯಾಂಕ್ನ ಪ್ರಾದೇಶಿಕ ವ್ಯವಸ್ಥಾಪಕ ಟಿ.ದೇವದಾಸ್, ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೊನೆಗೆ ಚಿಕ್ಕಬಳ್ಳಾಪುರ ಸೈಬರ್ ಪೊಲೀಸ್ ಠಾಣೆಯ ಪೊಲೀಸರು, ನಾಪತ್ತೆಯಾಗಿದ್ದ ಮಣೀಂದ್ರ ರೆಡ್ಡಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ವರ್ಗಾವಣೆ ಆಗಿದ್ದ ಬ್ಯಾಂಕ್ನ ಹಣದಲ್ಲಿ 84 ಲಕ್ಷ ರೂ. ಹಣವನ್ನು ಪ್ರೀಜ್ ಮಾಡಿಸಿದ್ದಾರೆ. ಇದನ್ನೂ ಓದಿ: ವಿಧಾನಪರಿಷತ್ ಉಪಸಭಾಪತಿಯಾಗಿ ಎಂ.ಕೆ ಪ್ರಾಣೇಶ್ ಆಯ್ಕೆ
ಇದೆ ಆಸಾಮಿ ಗುಡಿಬಂಡೆಯ ಉಲ್ಲೋಡು ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಸಹಾಯಕ ಬ್ಯಾಂಕ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾಗ, ಅಲ್ಲಿಯ ಕ್ಯಾಶಿಯರ್ ಸುನಿಲ್ ಲಾಗಿನ್ನಲ್ಲಿ ಗ್ರಾಹಕರ ಹಣ ಡ್ರಾ ಮಾಡಿದ್ದ. ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಆಗುತ್ತಿದ್ದಂತೆ, ತನ್ನ ಕುಕೃತ್ಯದ ವಿಷಯ ಎಲ್ಲಿ ಬಯಲಾಗುತ್ತೋ ಎಂಬ ಭಯದಿಂದ ಆತ್ಮಹತ್ಯೆಗೂ ಯತ್ನಿಸಿದ್ದ. ಸದ್ಯ ಆರೋಪಿ ಬ್ಯಾಂಕ್ ಮ್ಯಾನೇಜರ್ ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹದಲ್ಲಿ ಬಂಧಿತನಾಗಿದ್ದಾನೆ.