ಬೆಂಗಳೂರು: ಜೂನ್ 18 ರಂದು ಎಂ.ಜಿ ರಸ್ತೆಯ ಮಿತ್ತಲ್ ಟವರ್ ಬಳಿ ನಡೆದಿದ್ದ ಸೈಯದ್ ಇಮ್ರಾನ್ ಕೊಲೆ ಪ್ರಕರಣಕ್ಕೆ ಈಗ ಬೀಗ್ ಟ್ವಿಸ್ಟ್ ಸಿಕ್ಕಿದೆ.
ತನ್ನ ಮಗನನ್ನು ಕೊಲೆ ಮಾಡಲಾಗಿದೆ ಎಂದು ಇಮ್ರಾನ್ ತಂದೆ ಹಲಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಇದೀಗ ಇಮ್ರಾನ್ ನದ್ದು ಕೊಲೆ ಅಲ್ಲ, ಅಪಘಾತದಲ್ಲಿ ಮೃತಪಟ್ಟಿರುವ ವಿಷಯ ತಿಳಿದು ಬಂದಿದೆ.
ಇಮ್ರಾನ್ ಸಾವನ್ನಪ್ಪಿದ ದಿನ ಮಡಿವಾಳದಲ್ಲಿ ಮೊಬೈಲ್ ಕಳವುಗೈದು ಬರುತ್ತಿದ್ದನು. ಎಂ.ಜಿ ರಸ್ತೆಯಲ್ಲಿ ಬರುತ್ತಿದ್ದಾಗ ಟಿಟಿ ವಾಹನಕ್ಕೆ ಆತ ಚಮಕ್ ಕೊಟ್ಟಿದ್ದನು. ಈ ವೇಳೆ ಟಿಟಿ ವಾಹನ ಮತ್ತು ಇಮ್ರಾನ್ ಬೈಕ್ ಮಧ್ಯೆ ರಸ್ತೆಯಲ್ಲಿ ರೇಸಿಂಗ್ ನಡೆದಿದೆ. ಎಂ.ಜಿ ರಸ್ತೆಯ ಮಿತ್ತಲ್ ಟವರ್ ಬಳಿ ಬರುತ್ತಿದಂತೆಯೇ ಇಮ್ರಾನ್ ಆಯತಪ್ಪಿ ಬೈಕ್ನಿಂದ ಕೆಳಗೆ ಬಿದ್ದಿದ್ದಾನೆ. ಆ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಕಾರೊಂದು ಆತನನ್ನು ಗುದ್ದಿಕೊಂಡು ಪರಾರಿಯಾಗಿದೆ. ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಇಮ್ರಾನ್ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಈ ಎಲ್ಲಾ ದೃಶ್ಯಗಳು ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ತಂದೆ ನೀಡಿದ ದೂರಿನಂತೆ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲಿಸರು ತನಿಖೆ ನಡೆಸುತ್ತಿದ್ದ ವೇಳೆ ಈ ದೃಶ್ಯ ಪೊಲೀಸರ ಕೈಗೆ ಸಿಕ್ಕಿದೆ. ಹೀಗಾಗಿ ಇಮ್ರಾನ್ ಸಾವಿನ ಸತ್ಯ ಬಯಲಾಗಿದೆ.
ಸದ್ಯ ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 302 ಕೇಸ್ ಅನ್ನು ಹಲಸೂರು ಸಂಚಾರಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಹಲಸೂರು ಸಂಚಾರಿ ಪೊಲೀಸರು 3040 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.