ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಕಾಲದಲ್ಲೇ ಜಿಂದಾಲ್ ಕಂಪನಿಗೆ ಭೂಮಿ ನೀಡುವ ವಿಚಾರಕ್ಕೆ ಚಾಲನೆ ಸಿಕ್ಕಿದ್ದು ಎಂದು ಕೈಗಾರಿಕಾ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ.
ಇಂದು ರಾಜಭವನದಲ್ಲಿ ಮಾತನಾಡಿದ ಅವರು, ಈ ಹಿಂದೆ ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಈ ಯೋಜನೆಗೆ ಚಾಲನೆ ಸಿಕ್ಕಿದ್ದು, ಈಗ ಅವರೇ ವಿರೋಧ ಮಾಡಿದರೆ ಹೇಗೆ? ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪ ಹಿಂದೆ ಡಿಸಿಎಂ ಆಗಿದ್ದ ವೇಳೆಯೇ 2,000 ಎಕರೆ ಭೂಮಿಯನ್ನು ಜಿಂದಾಲ್ ಕಂಪನಿಗೆ ನೀಡಿ ಎಂದು ಆದೇಶ ಮಾಡಿದ್ದರು. ನಾವೇನೂ ಈಗ ಹೊಸದಾಗಿ ಆದೇಶ ಮಾಡುತ್ತಿಲ್ಲ. ಈಗ ಅವರೇ ಇದರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಕೈಗಾರಿಕೆಗಳ ಹಿತದೃಷ್ಟಿಯಿಂದಲೇ ಯೋಜನೆಗೆ ಸಂಪುಟ ಅಸ್ತು ಎಂದಿತ್ತು. ಸದ್ಯ ನಾನು ಇಂದಿನ ಸಂಪುಟದಲ್ಲಿ ಸಿಎಂ ಹೇಳಿರುವಂತೆ ಮತ್ತೊಮ್ಮೆ ಪರಿಶೀಲನೆಗೆ ನೀಡಿದ್ದೇವೆ ಎಂದು ತಿಳಿಸಿದರು.
ಜಿಂದಾಲ್ಗೆ ಜಮೀನು ಪರಭಾರೆ ವಿಚಾರದಲ್ಲಿ, ಇಂದಿನ ಕ್ಯಾಬಿನೆಟ್ ನಲ್ಲಿ ಮರು ಪರಿಶೀಲನೆ ಮಾಡುತ್ತೇವೆ. ಸಾರ್ವಜನಿಕ ವಲಯದಲ್ಲಿ ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಮರು ಪರಿಶೀಲನೆ ಮಾಡುತ್ತಿದ್ದೇವೆ ಎಂದು ಕೆ.ಜೆ ಜಾರ್ಜ್ ಹೇಳಿದರು.